ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರದಿಂದ ಕೇರಳಕ್ಕೆ ಬರಬೇಕಿರುವ ಅನುದಾನ ಮತ್ತು ಬಾಕಿ ಮೊತ್ತಗಳ ಕುರಿತು ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸೀತಾರಾಮನ್, ಮುಂದಿನ ಸುತ್ತಿನ ಹಣವನ್ನು ಬಿಡುಗಡೆ ಮಾಡುವಂತಾಗಲು ರಾಜ್ಯಗಳು ಬಳಕೆ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು.
ಉದಾಹರಣೆಗೆ ಕೇರಳಕ್ಕೆ ಸಂಬಂಧಿಸಿದ ನಿರ್ದಿಷ್ಟ ಪ್ರಕರಣವೊಂದರಲ್ಲಿ ಹಣವನ್ನು ಹಂಚಿಕೆ ಮಾಡಲಾಗಿದ್ದರೂ ರಾಜ್ಯ ಸರಕಾರವು ಮೊತ್ತವನ್ನು ಪಡೆದುಕೊಂಡಿಲ್ಲ ಎಂದು ಹೇಳಿದರು.
ಕೇರಳಕ್ಕಾಗಿ 311.95 ಕೋಟಿ ರೂ.ಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯು ವಯನಾಡಿನ ಭೂಕುಸಿತ ಪ್ರದೇಶಗಳಲ್ಲಿ ಅಪಾಯ ಶಮನ ಯೋಜನೆಗೆ 72 ಕೋಟಿ ರೂ.ಗಳನ್ನು ಒಳಗೊಂಡಿದೆ. ಅರಣ್ಯ ಅಗ್ನಿ ಶಮನ ಕಾರ್ಯಕ್ರಮಕ್ಕಾಗಿ 17.73 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದ್ದು, ಇದು ವಯನಾಡ್ ದುರಂತಕ್ಕೆ ಸಂಬಂಧಿಸಿಲ್ಲ. ತಿರುವನಂತರಪುರ ನಗರಕ್ಕಾಗಿ ನಗರ ನೆರೆ ಅಪಾಯ ನಿರ್ವಹಣೆ ಕಾರ್ಯಕ್ರಮದ ಎರಡನೇ ಹಂತದಡಿ 222.22 ಕೋಟಿ ರೂ.ಗಳನ್ನೂ ಮಂಜೂರು ಮಾಡಲಾಗಿದೆ ಎಂದು ಸೀತಾರಾಮನ್ ತಿಳಿಸಿದರು.
'ಅನುಮೋದಿಸಲಾಗಿರುವ 311.95 ಕೋಟಿ ರೂ.ಗಳ ಪೈಕಿ ಒಂದೇ ಒಂದು ಪೈಸೆಯನ್ನು ಬಿಡುಗಡೆ ಮಾಡಲಾಗಿಲ್ಲ. ರಾಜ್ಯವು ಅದಕ್ಕಾಗಿ ಅರ್ಜಿ ಸಲ್ಲಿಸಿದಾಗ ಮಾತ್ರ ನಾನು ಹಣವನ್ನು ಬಿಡುಗಡೆ ಮಾಡುತ್ತೇನೆ. ಹೀಗಾಗಿ ಅನುಮೋದಿಸುವುದು ಮತ್ತು ಅರ್ಜಿ ಸಲ್ಲಿಸುವುದು ಎರಡೂ ಬೇರೆ ಬೇರೆ ವಿಷಯಗಳಾಗಿವೆ' ಎಂದರು.
ವಯನಾಡ್ ವಿಪತ್ತು ನಿರ್ವಹಣೆಗೆ ನೀಡಲಾದ ಹಣಕಾಸು ನೆರವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಕೇರಳ ಸರಕಾರದ ನಡುವೆ ಸಮಸ್ಯೆಗಳಿವೆ. ಮುಂದಿನ ತಿಂಗಳು ಕೇರಳ ವಿಧಾನಸಭಾ ಚುನಾವಣೆ ನಡೆಯಲಿದೆ.

