ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದಾಗಿ 5,522 ವಿಮಾನಗಳ ಸಂಚಾರ ರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಸೇನಾ ಪಡೆಗಳು ಫೆಬ್ರುವರಿ 28ರಂದು ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ್ದವು.
ಸಂಘರ್ಷವು 17ನೇ ದಿನಕ್ಕೆ ಕಾಲಿಟ್ಟರೂ, ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಸದನದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವ, ವಿಮಾನಗಳ ಕಾರ್ಯಾಚರಣೆ ವೇಳೆ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
'ಪಶ್ಚಿಮ ಏಷ್ಯಾದಲ್ಲಿ ವಾಯುಪ್ರದೇಶ ಬಂದ್ ಆಗಿರುವುದರಿಂದಾಗಿ, ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಈವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳು 4,335 ವಿಮಾನಗಳು ಹಾಗೂ ವಿದೇಶಿ ಸಂಸ್ಥೆಗಳು 1,187 ವಿಮಾನಗಳ ಹಾರಾಟವನ್ನು ರದ್ದು ಮಾಡಿವೆ' ಎಂದು ತಿಳಿಸಿದ್ದಾರೆ.
'ನಾಗರಿಕ ವಿಮಾನಯಾನ ಸಚಿವಾಲಯವು ಸಂಬಂಧಪಟ್ಟ ರಾಷ್ಟ್ರಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಸಾಧ್ಯವಿದ್ದಾಗ ಕಾರ್ಯಾಚರಣೆ ಮುಂದುವರಿಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿಯೂ 2.19 ಲಕ್ಷ ಜನರು ಪ್ರಯಾಣಿಸಿದ್ದಾರೆ ಎಂದು ತಿಳಿಸಲು ಬಯುತ್ತೇನೆ' ಎಂದಿದ್ದಾರೆ.

