ಕೊಚ್ಚಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ 'ಎಲ್ಡಿಎಫ್'ಗೆ ಪೀಪಲ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಬೆಂಬಲ ಘೋಷಿಸಿದೆ.
ಎರ್ನಾಕುಲಂನಲ್ಲಿ ಭಾನುವಾರ ನಡೆದ ಪಕ್ಷದ ಸಭೆಯ ಬಳಿಕ ಪಿಡಿಪಿ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿ ಅವರು ಎಲ್ಡಿಎಫ್ ಜೊತೆಗಿನ ಮೈತ್ರಿಯ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಭಾರತದ ಬೇರೆ ಭಾಗಗಳಂತೆ, ಕೋಮುವಾದಿಗಳು ಕೇರಳದ ರಾಜಕೀಯವನ್ನು ಬದಲಾಯಿಸಲು ಹೊರಟಿದ್ದಾರೆ. ಅದನ್ನು ತಡೆಯುವ ಉದ್ದೇಶದಿಂದ ಹಾಗೂ ಎಡಪಂಥಿಯ ಚಿಂತನೆಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಮತ್ತು ಕೇರಳವನ್ನು ಜಾತ್ಯಾತೀತವಾಗಿ ಉಳಿಸುವುದಕ್ಕಾಗಿ ನಾವು ಎಲ್ಡಿಎಫ್ನೊಂದಿಗೆ ಕೈ ಜೋಡಿಸುತ್ತಿದ್ದೇವೆ ಎಂದು ಅಬ್ದುಲ್ ನಾಸರ್ ಮದನಿ ಹೇಳಿದ್ದಾರೆ.
ಸಂಘ ಪರಿವಾರದ ಗುಂಪುಗಳು ಮಂಡಿಸುವ ಆರೋಪಗಳ ಪ್ರಚಾರಕರಾಗಿ ಕಾರ್ಯನಿರ್ವಹಿಸುವ ಮೂಲಕ ಕಾಂಗ್ರೆಸ್ ಕೂಡ ಅಂತಹ ಶಕ್ತಿಗಳಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ಪಿಡಿಪಿ ಆರೋಪಿಸಿದೆ.
ಕೇರಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಭವಿಷ್ಯದಲ್ಲಿ ರಾಜ್ಯವನ್ನು ಜಾತ್ಯಾತೀತವಾಗಿ ಉಳಿಸುವುದಕ್ಕೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
140 ಸದಸ್ಯ ಬಲದ ಕೇರಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 9ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 4 ರಂದು ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ.

