ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ 'ನೀರಸ'ವಾಗಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.
'ಭಾರತದ ಜಲ ಪ್ರದೇಶದ ಬಳಿ ಇರಾನ್ನ ಐಆರ್ಐಎಸ್ ಡೆನಾ ನೌಕೆಯ ಮೇಲೆ ಅಮೆರಿಕ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಭಾರತ ಯಾವುದೇ ಪ್ರತಿಭಟನೆ ವ್ಯಕ್ತಪಡಿಸಿಲ್ಲ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಒದಗಿಸಬೇಕಿರುವ ತನ್ನ ಪಾತ್ರವನ್ನು ಭಾರತ ನಿಭಾಯಿಸಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ನೇತೃತ್ವದ ಎಐಸಿಸಿ ವಿದೇಶಾಂಗ ವ್ಯವಹಾರಗಳ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.
'ಸಾರ್ವಭೌಮ ರಾಷ್ಟ್ರವೊಂದರ ಮುಖ್ಯಸ್ಥರ (ಆಯತೊಲ್ಲಾ ಅಲಿ ಖಮೇನಿ) ಹತ್ಯೆಯನ್ನು ಈ ಹೇಳಿಕೆ ಖಂಡಿಸಿಲ್ಲ. ಯುದ್ಧದಿಂದ ಭಾರತಕ್ಕೆ ಎದುರಾಗಿರುವ ಸವಾಲುಗಳನ್ನು ಬಗೆಹರಿಸಲು ಪರಿಹಾರ ಮಾರ್ಗಗಳನ್ನೂ ಸೂಚಿಸಿಲ್ಲ' ಎಂದಿದೆ.
'ಜಾಗತಿಕ ಮದಲ್ಲಿ ನಡೆಯುತ್ತಿರುವ ಬದಲಾವಣೆಯ ಬಗ್ಗೆ ಅಥವಾ ಜಾಗತಿಕವಾಗಿ ಎದುರಾಗಿರುವ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕೆ ಸಂಬಂಧಿಸಿದ ಸ್ಪಷ್ಟ ಒಳನೋಟಗಳನ್ನು ಸಚಿವರು ನೀಡಿಲ್ಲ. ಅಸ್ಥಿರ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಮೌಲ್ಯಗಳು ಮತ್ತು ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಸಂಕಲ್ಪದ ಬಗ್ಗೆಯೂ ಉಲ್ಲೇಖಿಸಿಲ್ಲ' ಎಂದು ತಿಳಿಸಿದೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸೇನಾ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ಪ್ರತಿದಾಳಿಯಿಂದ ಉಂಟಾಗಿರುವ ಸಂಘರ್ಷದ ಕುರಿತು ಜೈಶಂಕರ್ ಅವರು ಸಂಸತ್ತಿನಲ್ಲಿ ಸೋಮವಾರ ಹೇಳಿಕೆ ನೀಡಿದ್ದರು.

