ನವದೆಹಲಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯು ಮಂಗಳವಾರ ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
'ಸರ್ಕಾರದ ಒತ್ತಡಕ್ಕೆ ಮಣಿಯದೆ ಸಂಸತ್ತಿನ ಕಲಾಪಗಳನ್ನು ನ್ಯಾಯಯುತವಾಗಿ ನಡೆಸುವ ಸ್ಪೀಕರ್ ಬೇಕು' ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರೆ, 'ಸ್ಪೀಕರ್ ಓಂ ಬಿರ್ಲಾ ಅವರು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದಾರೆ.
ವಿರೋಧ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಅಭಿಪ್ರಾಯ ಮಂಡಿಸಲು ಹೆಚ್ಚಿನ ಅವಕಾಶ ನೀಡಿದ್ದಾರೆ' ಎಂದು ಆಡಳಿತಾರೂಢ ಎನ್ಡಿಎ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿತು.
'ಸ್ಪೀಕರ್ ಬಿರ್ಲಾ ಅವರು ಸಜ್ಜನ. ಆದರೆ, ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ವಿರೋಧ ಪಕ್ಷದ ಸಂಸದರು ದೂರಿದರು.
ಡಿಎಂಕೆ ಮುಖಂಡ ಟಿ.ಆರ್. ಬಾಲು ಅವರು ಬಿರ್ಲಾ ಅವರನ್ನು 'ಸಜ್ಜನ' ಎಂದು ಹೊಗಳಿದರು. ಆದರೆ, ವಿರೋಧ ಪಕ್ಷಗಳ ಸದಸ್ಯರ ವಿರುದ್ಧ ಅವರು ಕೈಗೊಂಡ ಕಠಿಣ ಕ್ರಮಗಳಿಗೆ ವಿಷಾದ ವ್ಯಕ್ತಪಡಿಸಿದರು. ತಮ್ಮ ನಡವಳಿಕೆಯಲ್ಲಿ ಸ್ವೀಕರ್ ಬದಲಾವಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಟಿಡಿಪಿ ಸದಸ್ಯ ಲಾವು ಶ್ರೀಕೃಷ್ಣ ದೇವರಾಯಲು ಕೂಡ ಬಿರ್ಲಾ ಅವರನ್ನು ಹೊಗಳಿದರು. 'ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ಯಶಸ್ವಿಯಾಗಲು ಅಲ್ಲ, ಕೆಲವು ಮಹತ್ವದ ಬದಲಾವಣೆ ಆಗಲಿ' ಎಂದು ಅವರು ಹೇಳಿದರು.
ಶಿವಸೇನಾ (ಯುಬಿಟಿ) ಸದಸ್ಯ ಅರವಿಂದ್ ಸಾವಂತ್ ಕೂಡ ಸ್ಪೀಕರ್ ಓಂ ಬಿರ್ಲಾ ಅವರನ್ನು 'ಸಜ್ಜನ' ಎಂದು ಕರೆದರು. ಆದರೆ, ವಿರೋಧ ಪಕ್ಷದ ವಿರುದ್ಧ ಕ್ರಮವಹಿಸಲು ವಹಿಸಲು ಅವರಿಗೆ ಹೆಚ್ಚು ಒತ್ತಡ ಇದೆ' ಎಂದರು.
ಕಿರಣ್ ರಿಜಿಜು
'ಪ್ರಜಾಪ್ರಭುತ್ವದ ಮೇಲಿನ ದಾಳಿ'
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. 'ಕಾಂಗ್ರೆಸ್ 2014ರಲ್ಲಿ ಅಧಿಕಾರದಿಂದ ಕೆಳಗೆ ಇಳಿದ ನಂತರ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸತತ ದಾಳಿ ನಡೆಸುವುದನ್ನು ಮುಂದುವರಿಸಿದೆ. ಈ ಬಾರಿ ಸ್ಪೀಕರ್ ಹುದ್ದೆಯನ್ನು ಕೇಂದ್ರೀಕರಿಸಿ ದಾಳಿ ನಡೆಯುತ್ತಿದ್ದು ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಗೆ ಸಮಾನ' ಎಂದು ಅವರು ಹೇಳಿದರು.
'ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ಓಂ ಬಿರ್ಲಾ ತೆಗೆದುಕೊಂಡ ಕ್ರಮಗಳನ್ನು ರಿಜಿಜು ಬಲವಾಗಿ ಸಮರ್ಥಿಸಿಕೊಂಡರು. ಲೋಕಸಭೆಯಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ರಾಜೀವ್ ಗಾಂಧಿ ಸಹ ಪುನರುಚ್ಚರಿಸುತ್ತಿದ್ದರು' ಎಂದು ರಿಜಿಜು ಹೇಳಿದರು. 'ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಇಷ್ಟವಿಲ್ಲ ಆದರೆ ರಾಜಕೀಯ ಒತ್ತಡದಿಂದ ಇದನ್ನು ಬೆಂಬಲಿಸುತ್ತಿದ್ದೇವೆ' ಎಂದು ವಿರೋಧ ಪಕ್ಷಗಳ 50 ಸದಸ್ಯರು ವೈಯಕ್ತಿಕವಾಗಿ ನನಗೆ ತಿಳಿಸಿದ್ದಾರೆ' ಎಂದು ರಿಜಿಜು ಹೇಳಿದರು.
'ರಾಹುಲ್ಗಿಂತ ಪ್ರಿಯಾಂಕಾ ಉತ್ತಮರು'
'ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸದನದ ನಿಯಮಗಳನ್ನು ಕಡೆಗಣಿಸುತ್ತಿದ್ದು ತಮ್ಮ ನಡವಳಿಕೆಯಲ್ಲಿ ಅಪ್ರಬುದ್ಧತೆ ತೋರುತ್ತಿದ್ದಾರೆ. ರಾಹುಲ್ ಅವರಿಗಿಂತಲೂ ಕಾಂಗ್ರೆಸ್ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ಉತ್ತಮ ನಾಯಕರಾಗಬಲ್ಲರು' ಎಂದು ರಿಜಿಜು ಹೇಳಿದರು.
'ಸ್ಪೀಕರ್ ಅವರಿಗಿಂತ ನಾವೇ ದೊಡ್ಡವರು ಎಂದು ಕೆಲವರು ಭಾವಿಸಿದ್ದರೆ ಅದಕ್ಕೆ ಯಾವುದೇ ಔಷಧ ಇಲ್ಲ' ಎಂದು ರಾಹುಲ್ ಹೆಸರು ಉಲ್ಲೇಖಿಸದೆ ಟೀಕಿಸಿದರು. 'ಪ್ರಧಾನಿ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಕೆಸರೆರಚಾಟ ಯಾವುದೇ ಫಲ ನೀಡುವುದಿಲ್ಲ. ಅವರು ಕಮಲದಂತೆ ಪರಿಶುದ್ಧವಾಗಿದ್ದಾರೆ' ಎಂದು ರಿಜಿಜು ಹೇಳಿದರು.
'ದೈವಿಕ ಕರ್ಮ'
ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಬೆಂಬಲಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಇದನ್ನು 'ದೈವಿಕ ಕರ್ಮ' ಎಂದು ಕರೆದಿದ್ದಾರೆ. ಮಹುವಾ ಮೊಯಿತ್ರಾ ಅವರನ್ನು 2023ರಲ್ಲಿ ಲೋಕಸಭೆಯಿಂದ ಉಚ್ಛಾಟಿಸಲಾಗಿತ್ತು.

