ಕೋಲ್ಕತ್ತ: 'ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಆನಂದ್ ಬೋಸ್ ಅವರ ಸ್ಥಾನವನ್ನು ಆರ್.ಎನ್.ರವಿ ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ(ಅಮಿತ್ ಶಾ) ಅವರಿಂದ ತಿಳಿದು ಬಂದಿದೆ' ಎಂದು ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ವಿಧಾನಸಭಾ ಚುನಾವಣೆಗೂ ಮುನ್ನ ಅಮಿತ್ ಶಾ ಅವರ ಒತ್ತಡದಿಂದಲೇ ಬೋಸ್ ಅವರು ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ' ಎಂದು ಈ ವೇಳೆ ಆರೋಪಿಸಿದ್ದಾರೆ.
'ರಾಜ್ಯಪಾಲರ ರಾಜೀನಾಮೆ ನಿರ್ಧಾರವು ಆಘಾತ ಹಾಗೂ ಕಳವಳ ಮೂಡಿಸಿದೆ. ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂಬುದರ ಕುರಿತು ಈ ಕ್ಷಣದವರೆಗೂ ನನಗೂ ಕೂಡ ಗೊತ್ತಾಗಿಲ್ಲ' ಎಂದು ವಿವರಿಸಿದ್ದಾರೆ.
'ರಾಜೀನಾಮೆಗೆ ಕಾರಣವೇನು ಎಂಬುದರ ಕುರಿತು ಈ ಕ್ಷಣದವರೆಗೂ ನನಗೆ ಮಾಹಿತಿಯಿಲ್ಲ. ಆದಾಗ್ಯೂ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವರ ಒತ್ತಡದಿಂದ ಈ ನಿರ್ಧಾರಕ್ಕೆ ಬಂದಿರಬೇಕು. ಆ ಮೂಲಕ ಚುನಾವಣೆಯನ್ನು ಲಾಭ ಪಡೆಯುವ ಉದ್ದೇಶ ಹೊಂದಿರಬೇಕು' ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
'ರಾಜ್ಯಪಾಲರ ಬದಲಾವಣೆ ವಿಚಾರವನ್ನು ಅಮಿತ್ ಶಾ ಅವರು ನನಗೆ ತಿಳಿಸಿದರು ಮುಂಚಿತವಾಗಿ ಈ ಬಗ್ಗೆ ಸಂಪರ್ಕಿಸರಿರಲಿಲ್ಲ' ಎಂದು ವಿವರಿಸಿದ್ದಾರೆ. 'ಇಂತಹ ನಿರ್ಧಾರಗಳು ಸಂವಿಧಾನದ ಆತ್ಮವನ್ನೇ ಹಾಳುಗೆಡವುತ್ತದೆ ದೇಶದ ಒಕ್ಕೂಟದ ವ್ಯವಸ್ಥೆಯ ತಳಹದಿಯ ಮೇಲೆ ನಡೆದ ದಾಳಿಯಾಗಿದೆ' ಎಂದು ಕಿಡಿಕಾರಿದ್ದಾರೆ.
'ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಸಂಪ್ರದಾಯಗಳು ಹಾಗೂ ರಾಜ್ಯಗಳ ಘನತೆಯನ್ನು ಕುಗ್ಗಿಸುವ ಏಕಪಕ್ಷೀಯ ನಿರ್ಧಾರವನ್ನು ಕೈ ಬಿಡಬೇಕು' ಎಂದು ಈ ವೇಳೆ ಆಗ್ರಹಿಸಿದ್ದಾರೆ.

