ನವದೆಹಲಿ: 'ಕಾನೂನು ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸುವಂತೆ ಮಾಡಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಂಸ್ಥಿಕ ಸುಧಾರಣೆ ತರುವ ಅಗತ್ಯವಿದೆ' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಭಾನುವಾರ ಅಭಿಪ್ರಾಯಪಟ್ಟರು.
'ಇಂಡಿಯನ್ ವಿಮೆನ್ ಇನ್ ಲಾ' ಸಂಘಟನೆಯ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ 'ಅರ್ಧ ರಾಷ್ಟ್ರ- ಅರ್ಧ ಪೀಠ ಅಂತರವನ್ನು ನಿವಾರಿಸಿ- ಪೀಠವನ್ನು ಸಮತೋಲನಗೊಳಿಸಿ' ಎಂಬ ವಿಷಯದ ಕುರಿತು ಅವರು ಮಾತನಾಡಿದರು.
'ಹೈಕೋರ್ಟ್ ಕೊಲಿಜಿಯಂಗಳು ವಕೀಲರ ಸಂಘಗಳ ಅರ್ಹ ವಕೀಲೆಯರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಬಗ್ಗೆ ಪರಿಗಣಿಸಬೇಕು ಹಾಗೂ ಅದು ಸಾಮಾನ್ಯ ನಿಯಮವಾಗಿರಬೇಕು' ಎಂದು ಹೇಳಿದರು.
'ಅವರು ನ್ಯಾಯಸಮ್ಮತ ಮತ್ತು ಸೂಕ್ತವಾದ ಪ್ರಾತಿನಿಧ್ಯವನ್ನು ಬಯಸುತ್ತಿದ್ದಾರೆ. ಅದು ಬಹಳ ಹಿಂದೆಯೇ ಸಿಗಬೇಕಿತ್ತು. ವಕೀಲರ ಕ್ಷೇತ್ರವು ಈ ಸತ್ಯವನ್ನು ಅರಿತುಕೊಂಡಾಗ ಮಾತ್ರ, ನ್ಯಾಯಮೂರ್ತಿ ಪೀಠದತ್ತ ಸಾಗುವ ಹಾದಿ ಸುಗಮವಾಗುತ್ತದೆ' ಎಂದು ಹೇಳಿದರು.
'ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಪರಿಗಣಿಸುವ ಅಭ್ಯರ್ಥಿಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಆಯಾ ರಾಜ್ಯಗಳ ವಕೀಲೆಯರನ್ನು ಈ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು' ಎಂದು ಮನವಿ ಮಾಡಿದರು.

