ನವದೆಹಲಿ: ಎಲ್ಲ ಆಯಸಿಡ್ ದಾಳಿ ಸಂತ್ರಸ್ತರಿಗೆ (Acid Attack Survivors) ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ನೀತಿ ರೂಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಉದ್ಯೋಗಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ಸಂತ್ರಸ್ತರಿಗೆ ಜೀವನಾಧಾರ ಭತ್ಯೆಯನ್ನು ಪಾವತಿಸಲು ನೀತಿಯನ್ನು ರೂಪಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.
ಆಯಸಿಡ್ ದಾಳಿಯ ಸಂತ್ರಸ್ತರ ಪುನರ್ವಸತಿಗಾಗಿ ಸರ್ಕಾರದ ಇಲಾಖೆಗಳು ಅಥವಾ ಏಜೆನ್ಸಿಗಳಲ್ಲಿ ಉದ್ಯೋಗ ನೀಡುವ ಯೋಜನೆಯನ್ನು ಏಕೆ ರೂಪಿಸಲಾಗಿಲ್ಲ ಎಂಬುದನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿವರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಹೇಳಿದೆ.
ಆಯಸಿಡ್ ದಾಳಿಯ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವಲ್ಲಿ ತಾಂತ್ರಿಕ ಅಥವಾ ವ್ಯವಸ್ಥಾಪನ ಸಮಸ್ಯೆಗಳಿದ್ದರೆ ರಾಜ್ಯ ಸರ್ಕಾರಗಳು ಅವರಿಗೆ ಜೀವನೋಪಾಯಕ್ಕಾಗಿ ಭತ್ಯೆ (Subsistence Allowance) ನೀಡುವ ನೀತಿಯನ್ನು ರೂಪಿಸಬಹುದು ಎಂದು ಪೀಠ ಉಲ್ಲೇಖಿಸಿದೆ.
ಆಯಸಿಡ್ ದಾಳಿಯಿಂದ ಬದುಕುಳಿದ ಶಾಹೀನ್ ಮಲಿಕ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಈ ನಿರ್ದೇಶನ ಬಂದಿತು. ನ್ಯಾಯಾಲಯದ ಮನವಿಯ ಮೇರೆಗೆ ಹಿರಿಯ ವಕೀಲ ಸಿದ್ಧಾರ್ಥ್ ಲುತ್ರಾ ಉಚಿತವಾಗಿ ಮಲಿಕ್ ಅವರ ಪರ ವಾದಿಸಿದರು. ತಮ್ಮ ಅರ್ಜಿಯಲ್ಲಿ ಮಲಿಕ್, ಆಯಸಿಡ್ ದಾಳಿ ಸಂತ್ರಸ್ತರು ಬ್ಯಾಂಕ್ ಖಾತೆ ತೆರೆಯುವುದು, ಆಧಾರ್ ಕಾರ್ಡ್ ಮಾಡಿಸುವುದು, ಆಸ್ತಿ ನೋಂದಣಿ ಅಥವಾ ನವೀಕರಣ ಮಾಡುವುದು ಮತ್ತು ಮೊಬೈಲ್ ಸಿಮ್ ಕಾರ್ಡ್ ಖರೀದಿಸುವಾಗ ತೊಂದರೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಆಯಸಿಡ್ ದಾಳಿ ಸಂತ್ರಸ್ತರ ಕೆವೈಸಿ ನೋಂದಣಿಯ ಸಮಸ್ಯೆಯನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಕೆವೈಸಿ ಪ್ರಕ್ರಿಯೆಯಲ್ಲಿ ಕಣ್ಣುಗಳ ಪ್ಯೂಪಿಲ್ ವಿವರಗಳನ್ನು ಡಿಜಿಟಲ್ ರೀತಿಯಲ್ಲಿ ದಾಖಲಿಸುವುದು, ಕಣ್ಣು ಮಿಟುಕಿಸುವುದು ಹಾಗೂ ಬೆರಳಚ್ಚು ನೀಡುವಂತಹ ಕ್ರಮಗಳು ಒಳಗೊಂಡಿರುವುದರಿಂದ, ಆಯಸಿಡ್ ದಾಳಿಯಿಂದ ಗಾಯಗೊಂಡವರಿಗಾಗಿ ಈ ಪ್ರಕ್ರಿಯೆ ಸಾಮಾನ್ಯವಾಗಿ ಅಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.
ಆಯಸಿಡ್ ದಾಳಿ ಸಂತ್ರಸ್ತರು ಎದುರಿಸುತ್ತಿರುವ ತೊಂದರೆಗಳು ಮತ್ತು ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಸಮಗ್ರ ಮತ್ತು ಪರ್ಯಾಯ ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ಗೆ ಈ ಹಿಂದೆ ಆಯಸಿಡ್ ಸಂತ್ರಸ್ತರು ಮನವಿ ಮಾಡಿದ್ದರು.
ಈ ವರ್ಷದ ಆರಂಭದಲ್ಲಿ, ಆಯಸಿಡ್ ದಾಳಿ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಯ ಅಗತ್ಯವನ್ನು ನ್ಯಾಯಾಲಯವು ಎತ್ತಿ ತೋರಿಸಿತು. ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಲು ಹರಾಜು ಹಾಕಬೇಕೆಂದು ಸೂಚಿಸಿತು. ಈ ಅಭಿಪ್ರಾಯಗಳು ಶಾಹೀನ್ ಮಲಿಕ್ ಅರ್ಜಿಯ ವಿಚಾರಣೆ ವೇಳೆ ವ್ಯಕ್ತವಾಗಿದ್ದವು. ತಮ್ಮ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದ ನಂತರ, ಶಾಹೀನ್ ಮಲಿಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

