ಹೈದರಾಬಾದ್: ಇತ್ತೀಚೆಗೆ ಶಿಕ್ಷಣ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾದರೂ ಮಕ್ಕಳ ಮೇಲಿನ ಒತ್ತಡ ಕಡಿಮೆಯಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್ನಲ್ಲಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರಿಗೆ ವಿದ್ಯಾರ್ಥಿಯೊಬ್ಬನ ಭಾವನಾತ್ಮಕ ಪತ್ರ ಸಿಕ್ಕಿದೆ.
ವಿದ್ಯಾರ್ಥಿ ಉತ್ತರದೊಂದಿಗೆ ಭಾವನಾತ್ಮಕ ಮನವಿ ಮಾಡಿದ್ದಾನೆ. ವೈಯಕ್ತಿಕ ನೋವನ್ನು ಶಿಕ್ಷಕರೊಂದಿಗೆ ಹಂಚಿಕೊಂಡಿದ್ದಾನೆ. ಈ ವೈರಲ್
ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು, ಅನೇಕರು ವಿದ್ಯಾರ್ಥಿಯ ಬಗ್ಗೆ ಸಹಾನುಭೂತಿ ತೋರಿದರೆ ಇನ್ನು ಕೆಲವರು ಶಿಕ್ಷಣ ವ್ಯವಸ್ಥೆ ಹೇರುವ ಒತ್ತಡವನ್ನು ಪ್ರಶ್ನಿಸಿದ್ದಾರೆ.
ಇಂದು ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಶಿಕ್ಷಣ ವಿಚಾರದಲ್ಲಿ ಪೋಷಕರು ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳು ಪರೀಕ್ಷೆಯ ಸಮಯ ಬಂದಾಗ ಭಯಭೀತರಾಗುತ್ತಾರೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಇಂಟರ್ ಮೀಡಿಯೇಟ್ ಪರೀಕ್ಷೆಯ ಮೌಲ್ಯ ಮಾಪನದ ವೇಳೆ ಬಾಲಕನೊಬ್ಬ ಶಿಕ್ಷಕರ ಬಳಿ ಮಾಡಿದ ಮನವಿ ಗಮನ ಸೆಳೆದಿದೆ. ಇದು ಹಲವರ ಕಣ್ಣಂಚು ಒದ್ದೆ ಮಾಡಿದೆ.
ವಿದ್ಯಾರ್ಥಿ ತನ್ನ ಪತ್ರವನ್ನು ಭಾವನಾತ್ಮಕ ಮನವಿಯೊಂದಿಗೆ ಪ್ರಾರಂಭಿಸಿದ್ದಾನೆ. "ನನಗೆ ಪೋಷಕರು ಇಲ್ಲ ಸರ್. ನೀವೇ ನನ್ನ ಪೋಷಕರು. ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್...ʼʼ ಎಂದು ಬರೆದಿದ್ದಾನೆ. ಇದು ಬಾಲಕ ಎದುರಿಸುತ್ತಿರುವ ಒಂಟಿತನವನ್ನು ಎತ್ತಿ ತೋರಿಸಿದೆ. ಅವನು ಏಕೆ ಉತ್ತಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ಮತ್ತಷ್ಟು ವಿವರಿಸಿದ್ದಾನೆ. "ನಾನು ಅಧ್ಯಯನ ಮಾಡಿದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರಲಿಲ್ಲ. ಆದರೆ ದೇವರು ಇದ್ದಾನೆ ಎಂದು ನಾನು ನಂಬುತ್ತೇನೆ. ಈಗ, ನೀವು ನನ್ನ ದೇವರು, ಸರ್ʼʼ ಎಂದು ಮನವಿ ಮಾಡಿದ್ದಾನೆ
ಪೋಷಕರಿಲ್ಲದ ಮಗು ಅನುಭವಿಸುವ ನೋವನ್ನು ಈ ಪತ್ರ ಪ್ರತಿಫಲಿಸಿದೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದು, ನೆಟ್ಟಿಗರೊಬ್ಬರು ʼʼನಮ್ಮ ಶಿಕ್ಷಣ ವ್ಯವಸ್ಥೆ ಇಲ್ಲಿಯವರೆಗೆ ತಲುಪಿ ಬಿಟ್ಟಿದೆʼʼ ಎಂದು ಬರೆದಿದ್ದಾರೆ. "ವಿದ್ಯಾರ್ಥಿಗಳು ಪಾಸ್ ಆಗಲು ಶಿಕ್ಷಕರಲ್ಲಿ ಬೇಡುವ ಪರಿಸ್ಥಿತಿ ಬರಬಾರದು. ಮಕ್ಕಳ ಭಾವನೆಗಳಿಗೂ ಬೆಲೆ ನೀಡಬೇಕುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.

