ಕಠ್ಮಂಡು: ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಯುವಕರು ನಡೆಸಿದ ದಂಗೆಯನ್ನು ನಿಯಂತ್ರಿಸಲಾಗದೆ, ನೇಪಾಳ ಸರ್ಕಾರವು ಪತನಗೊಂಡಿತ್ತು. ಅದಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಸೋಲಿಸಿರುವ ಬಾಲೇಂದ್ರ ಶಾ ಅವರು ಇಂದು (ಮಾರ್ಚ್27) ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ತಮ್ಮ ಪ್ರತಿಜ್ಞಾವಿಧಿಯಲ್ಲಿ 'ಬಾಲೇಂದ್ರ ಶಾ ಎಂಬ ಹೆಸರಿನವನಾದ ನಾನು, ದೇಶ ಮತ್ತು ಜನರ ಹೆಸರಿನಲ್ಲಿ, ಸಂವಿಧಾನಕ್ಕೆ ನಿಷ್ಠನಾಗಿರುತ್ತೇನೆ ಮತ್ತು ಪ್ರಧಾನ ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಪೂರೈಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ' ಎಂಬುದಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಅವರು ತಮ್ಮ ನೆಚ್ಚಿನ ಕಪ್ಪು ವಸ್ತ್ರ ಹಾಗೂ ಕಪ್ಪು ಬಣ್ಣದ ಸನ್ ಗ್ಲಾಸ್ ಧರಿಸಿದ್ದರು.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿಂದೂ ಪುರೋಹಿತರು ಮತ್ತು ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಬಾಲೇಂದ್ರ ಶಾ ಅವರು, ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಪ್ರಮಾಣ ವಚನ ಬೋಧಿಸಿದರು.
ಬಾಲೇಂದ್ರ ಅವರು ನಾಲ್ಕು ಬಾರಿ ದೇಶದ ಪ್ರಧಾನಿಯಾಗಿದ್ದ ಕೆ.ಪಿ.ಶರ್ಮಾ ಓಲಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅದಕ್ಕೂ ಮಿಗಿಲಾಗಿ, ಅವರು ದೇಶದ ಕೋಟ್ಯಂತರ ಜೆನ್ ಝೀಗಳ ಮನಸ್ಸು ಗೆದ್ದಿದ್ದಾರೆ.
ಅಪ್ಪು ಅಭಿಮಾನಿ ಈಗ ನೇಪಾಳದ ಪ್ರಧಾನಿ ಅಭ್ಯರ್ಥಿ; ಅವರಿಗೂ ಬೆಂಗಳೂರಿಗೂ ಇದೆ ನಂಟುಬಾಲೇಂದ್ರ ಶಾ: ನೇಪಾಳ ಜೆನ್ ಝೀಗಳ 'ಕ್ರಾಂತಿ ಪುರುಷ'
2013ರವರೆಗೆ ದೇಶದಲ್ಲಿ ಅನಾಮಿಕರಾಗಿದ್ದ ಬಾಲೇಂದ್ರ ಶಾ ಅವರು ಹಾಡು ಬರೆದು, ಅವುಗಳಿಗೆ ಸಂಗೀತ ಸಂಯೋಜಿಸಿ ತಾವೇ ಹಾಡುವ ಅಭ್ಯಾಸದಿಂದಾಗಿ ಜೀವನ ಬದಲಾಯಿಸಿಕೊಂಡರು.
2012ರಲ್ಲಿ ತಮ್ಮ ಮೊದಲ ಹಿಪ್ ಹಾಪ್ ಹಾಡು ಬಿಡುಗಡೆ ಮಾಡಿದ್ದ ಅವರು, 2013ರಲ್ಲಿಯೂ ಟ್ಯೂಬ್ ರ್ಯಾಪ್ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಸರು ಮಾಡಿದರು. ಸಾಮಾಜಿಕ ಸಂಗತಿಗಳು, ಭ್ರಷ್ಟಾಚಾರ, ಅಸಮಾನತೆ, ನಗರ ಜೀವನದ ಬಗ್ಗೆ ಅನೇಕ ಹಾಡುಗಳನ್ನು ಬರೆದು, ಹಾಡಿ, ಪ್ರಸ್ತುತಪಡಿಸುವ ಮೂಲಕ ಜನಪ್ರಿಯತೆ ಗಳಿಸಿದರು. ಅವರ 'ಸಡಕ್ ಬಾಲಕ್', 'ಬಲಿದಾನ' ಮುಂತಾದ ಹಾಡುಗಳು ಯುವಜನರಲ್ಲಿ ಸಂಚಲನ ಸೃಷ್ಟಿಸಿ, ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದಿವೆ.

