ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕವಾಗಿ ತೀವ್ರ ಬಿಕ್ಕಟ್ಟು ತಲೆದೋರಿದ್ದು, ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಅತ್ಯಂತ ಕಠಿಣ ಸಮಯ ಎದುರಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
ಪಶ್ಚಿಮ ಏಷ್ಯಾ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, 'ಇಂಧನ ಭದ್ರತಾ ಅಗತ್ಯತೆಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ' ಎಂದು ತಿಳಿಸಿದ್ದಾರೆ.
ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಗಲ್ಫ್ ದೇಶಗಳ ಮೇಲೆ ಇರಾನ್ ನಿರಂತರ ದಾಳಿ ನಡೆಸುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಶುಕ್ರವಾರ 21ನೇ ದಿನಕ್ಕೆ ಕಾಲಿಟ್ಟಿದೆ.
ನಾವು ಜೀವಂತವಾಗಿದ್ದೇನೆ: ಸಾವಿನ ವದಂತಿ ನಿರಾಕರಿಸಿದ ನೆತನ್ಯಾಹು ಇರಾನ್ ನಾಶವಾಗುತ್ತಿದೆ, ಯುದ್ಧದಲ್ಲಿ ನಮಗೆ ಗೆಲುವು: ನೆತನ್ಯಾಹು
'ಹೌದು, ಇದು ನಮಗೆ ಮಾತ್ರವಲ್ಲ, ಜಾಗತಿಕ ಸಮುದಾಯಕ್ಕೆ ಕಠಿಣ ಸಮಯವಾಗಿದೆ. ನಮ್ಮ ನಾಯಕರು ಸಂಬಂಧಪಟ್ಟ ದೇಶಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಹೊರ್ಮುಜ್ ಜಲಸಂಧಿ ಮೂಲಕ ಸುರಕ್ಷಿತ ಹಾಗೂ ಮುಕ್ತ ಸಂಚಾರಕ್ಕೆ ಖಚಿತಪಡಿಸಿಕೊಳ್ಳುವ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.
'ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಖಾತ್ರಿಪಡಿಸಲು ನಿರಂತರ ರಾಜತಾಂತ್ರಿಕ ಮಾತುಕತೆಯು ಅತ್ಯಗತ್ಯ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಕೆಲವು ದಿನಗಳ ಹಿಂದೆ ನಾವು ನಡೆಸಿದ ಮಾತುಕತೆಯಿಂದಾಗಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಹೊರ್ಮುಜ್ ಜಲಸಂಧಿ ಮೂಲಕ ಎರಡು ಎಲ್ಪಿಜಿ ಹಡಗುಗಳನ್ನು ಸಾಗಿಸಲು ಸಾಧ್ಯವಾಯಿತು' ಎಂದು ಅವರು ಉಲ್ಲೇಖಿಸಿದ್ದಾರೆ.
'ಈ ಪ್ರದೇಶದಲ್ಲಿ ನೆಲೆಸಿರುವ ಭಾರತೀಯರ ಭದ್ರತೆ ಹಾಗೂ ಯೋಗಕ್ಷೇಮಕ್ಕಾಗಿ ಮೊದಲ ಆದ್ಯತೆ ನೀಡಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಫೆಬ್ರುವರಿ 28ರಿಂದ ಈವರೆಗೆ ಸುಮಾರು 2.8 ಲಕ್ಷ ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.

