ಹೈದರಾಬಾದ್: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಗುರುವಾರ ಸಂಭವಿಸಿದ್ದ ರಸ್ತೆ ಅಪಘಾತ ಸಂಬಂಧ ಹರಿಕೃಷ್ಣ ಟ್ರಾವೆಲ್ಸ್ ಮಾಲೀಕ ಪಿ. ಹರಿಕೃಷ್ಣಾರೆಡ್ಡಿ ಹಾಗೂ ಚಾಲಕ ಯುವರಾಜು ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಇಬ್ಬರೂ ತಲೆಮರೆಸಿಕೊಂಡಿದ್ದರು.
ಹರಿಕೃಷ್ಣಾರೆಡ್ಡಿ ಅವರ ಮೊಬೈಲ್ ಫೋನ್ ಸಿಗ್ನಲ್ ಜಾಡು ಹಿಡಿದು ಬಂಧಿಸಲಾಗಿದೆ. ಘಟನೆ ನಡೆದಾಕ್ಷಣ ಸ್ಥಳದಿಂದ ಪರಾರಿಯಾಗಿದ್ದ ಚಾಲಕ ಯುವರಾಜು ಅವರನ್ನು ಕನಿಗಿರಿಯ ಪಾಮೂರು ಪಟ್ಟಣದ ಬಳಿ ಬಂಧಿಸಲಾಗಿದೆ.
ಗುರುವಾರ ಬೆಳಿಗ್ಗೆ 5.30ರ ಸುಮಾರಿಗೆ ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 14 ಪ್ರಯಾಣಿಕರು ಸಜೀವ ದಹನವಾಗಿದ್ದರು. 22 ಮಂದಿ ಗಾಯಗೊಂಡಿದ್ದರು.
'ನಿದ್ದೆ ಮಂಪರಿನಲ್ಲಿದ್ದ ಚಾಲಕ'
'ಬಸ್ ದುರಂತಕ್ಕೆ ಚಾಲಕ ಯುವರಾಜು ನಿರ್ಲಕ್ಷ್ಯವೇ ಮೂಲ ಕಾರಣ. ಆತ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ. ರಾಯವರಂ ಬಳಿ ಎಸ್-ಆಕಾರದ ತಿರುವಿನಲ್ಲಿ ಬಸ್ ಚಲಾಯಿಸುವಾಗ ಚಾಲಕ ನಿದ್ದೆ ಮಂಪರಿನಿಂದ ಕಷ್ಟಪಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಎದುರಿನ ಲೇನ್ಗೆ ನುಗ್ಗಿ ಜಲ್ಲಿ ತುಂಬಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

