ಠಾಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಹಿಸುವ (MSRTC) ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಇನ್ಮುಂದೆ ಮದ್ಯ ಸೇವನೆಯ (alcohol consumption) ತಪಾಸಣೆ ಕಡ್ಡಾಯಗೊಳಿಸಲಾಗಿದೆ.
ಸುದ್ದಿಗಾರರರಿಗೆ ಇಂದು ಈ ವಿಷಯ ತಿಳಿಸಿದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು, ಕುಡಿದು ವಾಹನ ಚಲಾಯಿಸುವುದು ಹೆಚ್ಚುತ್ತಿದೆ.
ಹೀಗಾಗಿ ಮದ್ಯ ಸೇವನೆಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಇದನ್ನು ಉಲ್ಲಂಘನೆ ಮಾಡಿದರೆ ಸ್ವಲ್ಪವೂ ಸಹಿಸುವುದಿಲ್ಲ. ಅಂತವರನ್ನು ಕೆಲಸ ಬಿಡಿಸಿ ಮನೆಗೆ ಕಳುಹಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇತ್ತೀಚೆಗೆ ಮುಂಬೈನ ಪಾರ್ಲೆ ಬಸ್ನಿಲ್ದಾಣದ ಸಿಬ್ಬಂದಿ ಕಟ್ಟಡದಲ್ಲಿ ವ್ಯಾಪಕವಾಗಿ ಮದ್ಯದ ಬಾಟಲ್ಗಳು ಪತ್ತೆಯಾಗಿದ್ದರಿಂದ ಮಹಾರಾಷ್ಟ್ರ ಸಾರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಚಾಲಕ, ನಿರ್ವಾಹಕರ ಮದ್ಯಪಾನ ಅಭ್ಯಾಸದ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿ ರಚಿಸಿತ್ತು.
ಸಮಿತಿ ವರದಿ ನೀಡಿದ್ದು, ಇನ್ಮುಂದೆ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಇನ್ಮುಂದೆ ಮದ್ಯ ಸೇವನೆಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ನಿಗಮದ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ. ತಪಾಸಣೆಗೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಿದ್ದು ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ MSRTC ಚಾಲಕರಿಂದ ಮದ್ಯ ಸೇವಿಸಿ ವಾಹನ ಚಲಾವಣೆ ಹಾಗೂ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಈ ಕ್ರಮ ವಹಿಸಲಾಗಿದೆ.

