ಪೆರ್ಲ: ಪೂವನಡ್ಕದಲ್ಲಿರುವ ಶಿರಿಯ ಹೊಳೆಗೆ ಅಣೆಕಟ್ಟು ಮತ್ತು ಸೇತುವೆ ನಿರ್ಮಿಸಬೇಕೆಂಬ ದಶಕಗಳ ಬೇಡಿಕೆ ಇದೀಗ ಪ್ರಬಲವಾಗುತ್ತಿದೆ.
ಶಿರಿಯ ಹೊಳೆಗೆ ಪೂವನುಡ್ಕದಲ್ಲಿರುವ ಕರ್ನಾಟಕದ ಭಾಗವಾಗಿರುವ ಮಾಣಿಲದೊಂದಿಗೆ ಸಂಪರ್ಕಿಸಲು ಸೇತುವೆ ಮತ್ತು ಹೊಳೆಯ ಎರಡೂ ಬದಿಗಳ ಕೃಷಿ ಉದ್ದೇಶಗಳಿಗಾಗಿ ನೀರನ್ನು ಸಂಗ್ರಹಿಸಲು ಅಣೆಕಟ್ಟು ನಿರ್ಮಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಪೂವನಡ್ಕದಲ್ಲಿ ಪೆರ್ಲ-ಪೂವನುಡ್ಕ ರಸ್ತೆ ಕೊನೆಗೊಳ್ಳುತ್ತದೆ. ಆದರೆ ಸೇತುವೆ ಇದ್ದಿದ್ದರೆ ಇಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ಮತ್ತು ಉಪ್ಪಳ, ವಿಟ್ಲ ಮತ್ತು ಮಂಗಳೂರಿಗೆ ತ್ವರಿತವಾಗಿ ಪ್ರಯಾಣಿಸಲು ಸಾಧ್ಯವಿದೆ. ಜೊತೆಗೆ ಅಣೆಕಟ್ಟು ನಿರ್ಮಿಸಿದರೆ, ಕೃಷಿಯ ನೀರಾವರಿ ಉದ್ದೇಶಗಳಿಗಾಗಿ ಕೆರೆಗಳು, ಬಾವಿಗಳು, ಬೋರ್ವೆಲ್ಗಳಂತಹ ನೀರಿನ ಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಳ್ಳುತ್ತದೆ. ಇದು ನೀರಿನ ಕೊರತೆಯನ್ನು ಪರಿಹರಿಸುತ್ತದೆ. ಪೂವನುಡ್ಕ, ಪೆರ್ತಾಜೆ, ಸೇರಾಜೆ, ಸೋಮಾಜೆ ಮತ್ತು ಬೆಂಗಪದವಿನ ಸ್ಥಳೀಯ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಇಲ್ಲಿನ ಹೆಚ್ಚಿನ ಕೃಷಿಕರು ಅಡಕೆ, ತೆಂಗು, ಬಾಳೆ ಮತ್ತು ಕರಿಮೆಣಸು ಬೆಳೆಗಾರರು.
ಗಡಿಗಳಲ್ಲಿ ಕೊನೆಯಿಲ್ಲದ ಸಂಪರ್ಕ ಸಮಸ್ಯೆ:
ಶಿರಿಯ ಹೊಳೆ ಸಾಗುವ ಗಡಿ ಗ್ರಾಮಗಳಲ್ಲಿ ಇದೇ ರೀತಿಯ ಅಂತರ್ ರಾಜ್ಯ ಸಂಪರ್ಕ ಸಮಸ್ಯೆ ದಶಕಗಳಿಂದಲೂ ಪರಿಹಾರತವಿಲ್ಲದೆ ಮುಂದುವರಿದಿದೆ. ಎಣ್ಮಕಜೆ ಪಂಚಾಯತಿಯ ಬಾಕಿಲಪದವು ಪ್ರಹ್ಲಾದಪುರದಲ್ಲೂ ಶಿರಿಯ ಹೊಳೆಗೆ ಸೇತುವೆಯ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿಯ ಸೇತುವೆ ಸಾಕಾರಗೊಂಡಲ್ಲಿ ಕರ್ನಾಟಕದ ಅಡ್ಯನಡ್ಕ, ವಿಟ್ಲ ಮೊದಲಾದೆಡೆಗೆ ಸುಲಭ ನೇರ ಪ್ರಯಾಣ ಜನರಿಗೆ ಪ್ರಯೋಜನಕಾರಿಯಾಗಲಿದೆ. ಕಳೆದ ಕೆಲವು ವರ್ಷಗಳಿಂದ ಯೋಜನೆ ರೂಪಿಸುತ್ತಿದ್ದರೂ ಹಲವು ತಾಂತ್ರಿಕ, ಸಾಮಾಜಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದೆ.
ಅಭಿಮತ:
-ಗ್ರಾ.ಪಂ.ಲ್ಲಿ ಇದೀಗ ಹೊಸ ಆಡಳಿತ ಸಮಿತಿ ಅಧಿಕಾರಕ್ಕೆ ಬಂದಿದ್ದು, ನಮ್ಮ ತಮಡದ ಮೊದಲ ಸಭೆಯಲ್ಲಿ ಪೂವನಡ್ಕ ಸೇತುವೆ ಮತ್ತು ಬಾಕಿಲಪದವು ಸೇತುವೆ ನಿರ್ಮಾಣದ ಬಗ್ಗೆ ಜನರಿಂದ ಬೇಡಿಕೆ ಮತ್ತೆ ಬಂದಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತ ಸಮಿತಿ ಶೀಘ್ರ ಚಿಂತನೆ ನಡೆಸಿ ಅನುಷ್ಠಾನಕ್ಕೆ ಅಗತ್ಯದ ಕ್ರಮ ಕೈಗೊಳ್ಳಲಿದೆ. ಬಾಕಿಲಪದವಲ್ಲಿ ನಿರ್ಮಿಸಬೇಕಾದ ಸೇತುವೆಯ ಬಗ್ಗೆ ಇತ್ತೀಚೆಗೆ ಸಾಯ ವಾರ್ಡ್ ಮಟ್ಟದ ಗ್ರಾಮಸಭೆಯಲ್ಲಿ ಅಲ್ಲಿಯ ನಾಗರಿಕರು ಬಲವಾಗಿ ಬೇಡಿಕೆ ಎತ್ತಿದ್ದಾರೆ. ಎರಡೂ ಸೇತುವೆಗಳನ್ನೂ ಈ ಆಡಳಿತ ಅವಧಿಯಲ್ಲಿ ಪೂರ್ಣಗೊಳಿಸಲು ಪಂ.ಆಡಳಿತ ಪ್ರಯತ್ನಿಸಲಿದೆ.
-ಕುಸುಮಾವತಿ ಟೀಚರ್.
ಅಧ್ಯಕ್ಷೆ. ಎಣ್ಮಕಜೆ ಗ್ರಾಮ ಪಂಚಾಯತಿ.ಪೆರ್ಲ.

.jpg)
.jpg)
