ಪಣಜಿ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಆಕಾಶ ಏರ್ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನದ ಟಾಯ್ಲೆಟ್ ಒಳಗೆ ಲೈಟರ್ ಹೊತ್ತಿಸಿ ಬೀಡಿ ಸೇದಿರುವ ಆಘಾತಕಾರಿ ಘಟನೆ ನಡೆದಿದೆ.
ಘಟನೆಯಿಂದ ಪ್ರಯಾಣಿಕರು ವಿಚಲಿತರಾಗಿದ್ದರು. ಕೂಡಲೇ ವಿಮಾನದ ಸಿಬ್ಬಂದಿ ಬೀಡಿ ಸೇದಿದ್ದ ಪ್ರಯಾಣಿಕನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಾನುವಾರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗೋವಾದ ಮೊಪಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪೊಲೀಸರು ಬೀಡಿ ಸೇದಿದ್ದವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ ಪೊಲೀಸರು ಕೆಲ ಬೀಡಿಗಳನ್ನು ಹಾಗೂ ಲೈಟರ್ ಅನ್ನು ವಶಪಡಿಸಿಕೊಂಡಿದ್ದು. ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ಹುಚ್ಚಾಟ ಮೆರೆದಿದ್ದ ಪ್ರಯಾಣಿಕ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ, ನಿಯಮಾವಳಿಗಳನ್ನು ಪಾಲಿಸಿ ದೂರು ಸಲ್ಲಿಸಲಾಗಿದ್ದು, ಪೊಲೀಸರಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದು ಆಕಾಶ ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

