ಚೆನೈ: 'ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ'(ಎಐಪಿಟಿಎಂಎಂಕೆ) ಪಕ್ಷದ ಸಂಸ್ಥಾಪಕಿ ವಿ.ಕೆ. ಶಶಿಕಲಾ ಅವರು, ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಶುಕ್ರವಾರ ಘೋಷಿಸಿದರು.
ತಿಂಡಿವನಂ ಬಳಿಯ ತೈಲಪುರಂನಲ್ಲಿರುವ ತೋಟದ ಮನೆಯಲ್ಲಿ ಶಶಿಕಲಾ ಮತ್ತು ರಾಮದಾಸ್ ಜಂಟಿಯಾಗಿ ಮೈತ್ರಿ ಘೋಷಿಸಿದರು.
ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗಲು ಇಬ್ಬರೂ ಯತ್ನಿಸಿದ್ದರು. ಮಾತುಕತೆ ವಿಫಲವಾಗಿತ್ತು. ಆಗಲೇ ಇಬ್ಬರೂ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿತ್ತು.
ತಮ್ಮ ಪುತ್ರ ಆರ್. ಅನ್ಬುಮಣಿ ಅವರಿಂದ ದೂರ ಇರುವ ರಾಮದಾಸ್ ಅವರು ವಣ್ಣಿಯಾರ್ ಪ್ರಾಬಲ್ಯದ ಉತ್ತರ ತಮಿಳುನಾಡಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಗಳಾಗದಿದ್ದರೂ, ಎಐಎಡಿಎಂಕೆ ಹಾಗೂ ಪಿಎಂಕೆ ಅಭ್ಯರ್ಥಿಗಳಿಗೆ ಬಲವಾದ ಪೆಟ್ಟು ನೀಡಲಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

