ಕೀವ್/ಅಬುಧಾಬಿ: ಇಸ್ರೇಲ್-ಇರಾನ್-ಅಮೆರಿಕ ನಡುವಿನ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಗೆದರಿರುವ ನಡುವೆ, ಗಲ್ಫ್ ರಾಷ್ಟ್ರಗಳು ಉಕ್ರೇನ್-ರಷ್ಯಾ ನಡುವಿನ ಕದನ ವಿರಾಮ ಸಾಧಿಸಲು ನೆರವಾದರೆ, ಪಶ್ಚಿಮ ಏಷ್ಯಾ ದೇಶಗಳಿಗೆ ಇರಾನ್ ಡ್ರೋನ್ ತಡೆಯಲು ರಕ್ಷಣಾ ತಜ್ಞರನ್ನು ಕಳುಹಿಸಲು ಸಿದ್ಧವಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಹತ್ವದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಇರಾನ್ ಮೇಲಿನ ಜಂಟಿ ಇಸ್ರೇಲಿ-ಅಮೆರಿಕ ದಾಳಿಗೆ ಪ್ರತಿಕ್ರಿಯೆಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಅದರ ರಾಜಧಾನಿ ಅಬುಧಾಬಿಯು ಶನಿವಾರದಿಂದ ಇರಾನಿನ ದಾಳಿಗೆ ತುತ್ತಾಗಿರುವ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ರಷ್ಯಾದೊಂದಿಗೆ ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಳು ಎಂದಿನಂತೆ ಮುಂದುವರಿಯಬೇಕು ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಬುಧಾಬಿಯಲ್ಲಿ ಮಾತುಕತೆಗಳನ್ನು ಆಯೋಜಿಸಿತ್ತು. ಮಾರ್ಚ್ 5 ಮತ್ತು 8ರ ನಡುವೆ ಹೊಸ ಸುತ್ತಿನ ಮಾತುಕತೆಗಳು ನಿಗದಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ಸಭೆ ನಡೆಯಬೇಕು. ಇದು ನಮಗೆ ಮುಖ್ಯವಾಗಿದೆ. ನಾವು ಈ ಸಭೆಯನ್ನು ಬೆಂಬಲಿಸುತ್ತೇವೆ," ಎಂದು ಝೆಲೆನ್ಸ್ಕಿ ವರದಿಗಾರರಿಗೆ ತಿಳಿಸಿದ್ದಾರೆ.
ಅಬುಧಾಬಿಯಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಭದ್ರತಾ ತೊಂದರೆ ಉಂಟಾದರೆ, ಪರ್ಯಾಯ ಸ್ಥಳಗಳನ್ನು ಪರಿಗಣಿಸುವುದಾಗಿ ಅವರು ಹೇಳಿದರು. "ಅಬುಧಾಬಿಯಲ್ಲಿ ಭದ್ರತಾ ತೊಂದರೆಗಳಿದ್ದರೆ, ನಮಗೆ ಟರ್ಕಿ ಇದೆ, ನಮಗೆ ಸ್ವಿಟ್ಜರ್ಲೆಂಡ್ ಇದೆ. ಸಭೆಗಾಗಿ ಈ ಮೂರು ಸ್ಥಳಗಳಲ್ಲಿ ಯಾವುದನ್ನಾದರೂ ನಾವು ಖಂಡಿತವಾಗಿಯೂ ಬೆಂಬಲಿಸುತ್ತೇವೆ," ಎಂದು ಅವರು ಸ್ಪಷ್ಟಪಡಿಸಿದರು.
ನಿರಂತರ ಸಂವಾದದ ಪರವಾಗಿ ಮಾಸ್ಕೋ ಕೂಡ ಕದನ ವಿರಾಮದ ನಿಲುವು ತಾಳಿದೆ. ಯುಎಸ್-ಇರಾನ್ ಮಾತುಕತೆಗಳು ವಿಫಲವಾದ ನಂತರ ರಷ್ಯಾದ ನಿಲುವು ಬದಲಾಗಿದೆಯೇ ಎಂಬ ಪ್ರಶ್ನೆಗೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿ, "ರಾಜಕೀಯ ಮತ್ತು ರಾಜತಾಂತ್ರಿಕ ಕದನವಿರಾಮವು ರಷ್ಯಾಕ್ಕೆ ಆದ್ಯತೆಯಾಗಿ ಉಳಿದಿದೆ," ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಯುದ್ಧ ಮುಂದುವರಿದರೆ, ಉಕ್ರೇನ್ ರಷ್ಯಾದ ದಾಳಿಗಳನ್ನು ತಡೆಯಲು ಬಳಸುತ್ತಿರುವ ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. ಅಮೆರಿಕ ನಿರ್ಮಿತ ಪೇಟ್ರಿಯಾಟ್ ಬ್ಯಾಟರಿಗಳೂ ಇದರಲ್ಲಿ ಸೇರಿವೆ.

