ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶಾತಿ ಪ್ರಕರಣ ಕುರಿತಂತೆ ತಾವು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಸಹೋದರಗೆ ಕರೆ ಮಾಡಿದ್ದಕ್ಕಾಗಿ ಸಿಜೆಐ ನೇತೃತ್ವದ ಪೀಠವು ಅರ್ಜಿದಾರರ ತಂದೆಗೆ ಬುಧವಾರ ಛೀಮಾರಿ ಹಾಕಿತು.
'ಯಾವತ್ತೂ ಇಂಥ ಸಾಹಸ ಮಾಡಬೇಡಿ' ಎಂದು ಕಟು ಮಾತುಗಳಲ್ಲಿ ಹೇಳಿದ ಸಿಜೆಐ ಸೂರ್ಯ ಕಾಂತ್, 'ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ' ಎಂದು ಆ ವ್ಯಕ್ತಿಗೆ ಎಚ್ಚರಿಕೆ ನೀಡಿದರು.
ಸಾಮಾನ್ಯ ವರ್ಗಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳು (ಅರ್ಜಿದಾರರು) ಬೌದ್ಧ ಸಂಸ್ಥೆಗೆ ಸೇರಿದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕೋರಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಪೀಠವು ನಡೆಸಿತು.
ವಿಚಾರಣೆ ವೇಳೆ, 'ಅರ್ಜಿದಾರರ ತಂದೆ ನನ್ನ ಸಹೋದರಗೆ ಕರೆ ಮಾಡಿದ್ದಾರೆ. ನಾನು ಈ ಆದೇಶವನ್ನು ಹೇಗೆ ಹೊರಡಿಸಿದೆ ಎಂದು ಪ್ರಶ್ನಿಸಿದ್ದಾರೆ' ಎಂದ ಸಿಜೆಐ,'ನಾನು ಹೇಗೆ ಆದೇಶಿಸಬೇಕು ಎಂಬ ಬಗ್ಗೆ ಅವರು ನಿರ್ದೇಶನ ನೀಡುತ್ತಾರಾ' ಎಂದು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಹೇಳಿದ್ದಾರೆ.
'ನಿಮ್ಮ ಕಕ್ಷಿದಾರರ ತಂದೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬಾರದೇಕೆ? ಅವರು ಎಂಥ ಕೆಲಸ ಮಾಡಿದ್ದಾರೆ ಎಂಬ ಅರಿವು ನಿಮಗೆ ಇದೆಯೇ' ಎಂದು ಪ್ರಶ್ನಿಸಿದ್ದಾರೆ.
'ಇಂಥ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತು. ಅವರು ವಿದೇಶದಲ್ಲಿ ಅಡಗಿದರೂ ಸರಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಹೇಗೆಂಬುದು ಗೊತ್ತು' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ,'ನನ್ನ ಕಕ್ಷಿದಾರರ ತಂದೆ ಈ ರೀತಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ' ಎಂದರು.
ನಂತರ, ಅರ್ಜಿಯನ್ನು ವಿಚಾರಣೆ ಪಟ್ಟಿಗೆ ಹೊಸದಾಗಿ ಸೇರಿಸಿ, ಪೀಠ ಆದೇಶಿಸಿತು.

