ಕಾಸರಗೋಡು: ಮಧೂರು ಸನಿಹ ಪಟ್ಲದಲ್ಲಿ ವ್ಯಕ್ತಿಯೊಬ್ಬರ ಮನೆ ವಠಾರದಲ್ಲಿಈಜುಕೊಳ ನಿರ್ಮಣದ ಮಧ್ಯೆ ವಿದ್ಯುತ್ ಶಾಕ್ ತಗುಲಿ, ಪ್ಲಂಬಿಂಗ್ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳ್ಳೂರು ಮೂಕಟಂಗೋಳಿ ನಿವಾಸಿ ಚಿಕ್ಕಪ್ಪ ರೈ-ರತ್ನಾವತಿ ದಂಪತಿ ಪುತ್ರ ಪ್ರಭಾಕರ ರೈ(39) ಮೃತ ಪಟ್ಟವರು.
ಮಧೂರು ಪಟ್ಲ ಸರ್ಕಾರಿ ಶಾಲೆ ಸಮೀಪದ ನಿವಾಸಿ ಅಬ್ದುಲ್ಲ ಎಂಬವರ ಮನೆಯಂಗಳದಲ್ಲಿ ಸ್ವಿಮ್ಮಿಂಗ್ ಫೂಲ್ ಕೆಲಸದಲ್ಲಿ ನಿರತರಾಗಿದ್ದಾಗ ಬುಧವಾರ ಸಂಜೆ ವಿದ್ಯುತ್ ಶಾಕ್ ತಗುಲಿದ್ದರೂ, ರಾತ್ರಿ ವೇಳೆ ಮಾಹಿತಿ ಬಹಿರಂಗಗೊಂಡಿದೆ.
ಕಾಸರಗೋಡಿನಿಂದ ಅಗ್ನಿ ಶಾಮಕ ದಳ ತಲುಪಿ ಇವರನ್ನು ಕಾಸರಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲಿಲ್ಲ. ಮುಹಾದ್ ಎಂಬವರ ನೇತೃತ್ವದಲ್ಲಿ ಸ್ವಿಮ್ಮಿಂಗ್ ಫೂಲ್ ಕೆಲಸ ನಡೆಯುತ್ತಿತ್ತು. ಪ್ರಭಾಕರ ರೈ ಇವರ ಬಳಿ ಕೆಲಸ ನಿರ್ವಹಿಸುತ್ತಿದ್ದು, ರಂಜಾನ್ ವ್ರತಾಚರಣೆ ಹಿನ್ನೆಲೆಯಲ್ಲಿ ಸಂಜೆ 4ರ ವೇಳೆಗೆ ಕೆಲಸ ನಿಲ್ಲಿಸಿ ತೆರಳುವಂತೆ ಮುಹಾದ್ ತಿಳಿಸಿ ತೆರಳಿದ್ದರು. ತಡರಾತ್ರಿ ವರೆಗೂ ಪ್ರಭಾಕರ ರೈ ಮನೆಗೆ ತಲುಪದಿರುವುದರಿಂದ ಹುಡುಕಾಡುವ ಮಧ್ಯೆ ಪ್ರಭಾಕರ ರೈ ಕೆಲಸದ ಸ್ಥಳದಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಅಸಹಜ ಸಾವಿನ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



