ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಮಾರ್ಚ್ 9ರಿಂದ ಪುನರಾರಂಭವಾಗಲಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ಸೂಚಿಸಿದೆ.
'ಪಕ್ಷಪಾತ ಧೋರಣೆಯಿಂದ ವರ್ತಿಸಿದ್ದಾರೆ' ಎಂಬ ಆರೋಪದ ಮೇರೆಗೆ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಪದಚ್ಯುತಿಗೊಳಿಸುವ ನಿರ್ಣಯವನ್ನು ಮಂಡಿಸಲು ವಿರೋಧ ಪಕ್ಷದ ಕನಿಷ್ಠ 118 ಸಂಸದರು ನೋಟಿಸ್ ನೀಡಿದ್ದರು.
ಆ ಸಂದರ್ಭದಲ್ಲಿ ಟಿಎಂಸಿ ಸಂಸದರು ನೋಟಿಸ್ಗೆ ಸಹಿ ಹಾಕಿರಲಿಲ್ಲ.
'ನಮ್ಮ ಪಕ್ಷ ಯಾವಾಗಲೂ ಅವಿಶ್ವಾಸ ನಿರ್ಣಯದ ಪರ ನಿಲುವು ಹೊಂದಿತ್ತು. ನಿರ್ಣಯವನ್ನು ಆತುರವಾಗಿ ಮಂಡಿಸುವುದು ಇಷ್ಟವಿರಲಿಲ್ಲ. ಆದ್ದರಿಂದ, ಬಜೆಟ್ ಅಧಿವೇಶನದ ಕೊನೆಯ ಭಾಗದಲ್ಲಿ, ಮೂರು ದಿನಗಳ ನಂತರ ಅದನ್ನು ಸಲ್ಲಿಸಿ ಎಂದು ನಾವು ಹೇಳಿದ್ದೆವು' ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.
'ಸೋಮವಾರ ನೋಟಿಸ್ ಅನ್ನು ಪರಿಗಣಿಸುವ ವೇಳೆ, ಅನಾರೋಗ್ಯ ಪೀಡಿತರನ್ನು ಹೊರತುಪಡಿಸಿ, ಟಿಎಂಸಿಯ ಬಹುತೇಕ ಸಂಸದರು ಲೋಕಸಭೆಯಲ್ಲಿ ಹಾಜರಿರುತ್ತಾರೆ. ಈ ಸಂಬಂಧ ಇಂಡಿಯಾ ಬಣದ ಇತರ ನಾಯಕರೊಂದಿಗೆ ಟಿಎಂಸಿ ನಾಯಕರು ಸಂಪರ್ಕದಲ್ಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷದ ಸದಸ್ಯರು ಮಂಡಿಸಿರುವ ನಿರ್ಣಯವು ಮಾರ್ಚ್ 9ರಂದು ಲೋಕಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿದೆ.
ಈ ವೇಳೆ ಸ್ಪೀಕರ್ ಪೀಠದಲ್ಲಿ ಕುಳಿತವರು ಕರೆದಾಗ, ಕನಿಷ್ಠ 50 ಸದಸ್ಯರು ಎದ್ದು ನಿಂತು ನಿರ್ಣಯಕ್ಕೆ ಬೆಂಬಲ ಸೂಚಿಸಬೇಕು. ಆ ನಂತರ, ಈ ನಿರ್ಣಯದ ಮೇಲೆ ಸುದೀರ್ಘ ಚರ್ಚೆ ನಡೆದು, ಅಂತಿಮವಾಗಿ ಮತದಾನದ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ, 50 ಸದಸ್ಯರು ನೋಟಿಸ್ಗೆ ಬೆಂಬಲ ನೀಡದಿದ್ದರೆ, ನಿರ್ಣಯವನ್ನು ಮಂಡಿಸಲಾಗುವುದಿಲ್ಲ.
ವಿಪ್ ಜಾರಿ
ಸದನದಲ್ಲಿ ಎಲ್ಲ ಸಂಸದರು ಹಾಜರಿರುವಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ವಿಪ್ ಜಾರಿ ಮಾಡಿವೆ. ಸರ್ಕಾರ ಬಹುಮತ ಹೊಂದಿರುವುದರಿಂದ ನಿರ್ಣಯಕ್ಕೆ ಸೋಲಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

