ನವದೆಹಲಿ: ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕಾದ ಸಂಘರ್ಷದ ಬಗ್ಗೆ ಕೇಂದ್ರದ ನಿಲುವನ್ನು ಟೀಕಿಸಿರುವ ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಮೋದಿ ಮಾತನಾಡಬೇಕಾದಾಗ ಮೌನವಾಗಿರುತ್ತಾರೆ ಆದರೆ ಅಗತ್ಯವಿಲ್ಲದಿದ್ದಾಗ ದೀರ್ಘ ಭಾಷಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಜವಾಹರಲಾಲ್ ನೆಹರು, ಪಿ.ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಉದಾಹರಣೆಗಳನ್ನು ಉಲ್ಲೇಖಿಸಿ ಹಿಂದಿನ ಭಾರತದ ಪ್ರಧಾನ ಮಂತ್ರಿಗಳು ದೇಶದ ಮೌಲ್ಯಗಳನ್ನು ಎತ್ತಿಹಿಡಿಯುವ ನಿರ್ಣಾಯಕ ಕ್ಷಣಗಳಲ್ಲಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ದಾರೆ.
ಇತಿಹಾಸ ನಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ. 1953ರಲ್ಲಿ ರಷ್ಯಾದ ಪಡೆಗಳು ಇರಾನ್ನಲ್ಲಿ ಆಕ್ರಮಣ ನಡೆಸಿದಾಗ ಪಂಡಿತ್ ನೆಹರು ವಿರೋಧಿಸಿದ್ದರು. ಇರಾನಿನ ಜನರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಅಲ್ಲಿಂದ ರಷ್ಯಾ ಪಡೆಗಳು ಹೊರಹೋಗಬೇಕು ಎಂದಿದ್ದರು. ರಷ್ಯಾ ನಮಗೆ ಸ್ನೇಹಿತ ರಾಷ್ಟ್ರವಾಗಿದ್ದರು ನೆಹರೂ ಆ ಹೇಳಿಕೆ ನೀಡಿದ್ದು ಅವರ ಧೈರ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
1994ರಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಪಾಕಿಸ್ತಾನ ಮಂಡಿಸಲು ಬಯಸಿದ ಕಾಶ್ಮೀರದ ಕುರಿತ ನಿರ್ಣಯವನ್ನು ಬೆಂಬಲಿಸದಂತೆ ಪಿವಿ ನರಸಿಂಹ ರಾವ್ ಅವರು, ಅಲಿ ಖಮೇನಿ ಮನವೊಲಿಸಲು ದಿನೇಶ್ ಸಿಂಗ್ ಅವರನ್ನು ಇರಾನ್ಗೆ ಕಳುಹಿಸಿದ್ದರು.
2006ರಲ್ಲಿ ಇರಾನಿನ ಜನರ ಹಕ್ಕುಗಳನ್ನು ಮೊಟಕುಗೊಳಿಸುವ ಐಎಇಎ ನಿರ್ಣಯವನ್ನು ಭಾರತ ಬೆಂಬಲಿಸಬೇಕೆಂದು ಅಮೆರಿಕ ಬಯಸಿತ್ತು. ನೀವು ಹಾಗೆ ಮಾಡದಿದ್ದರೆ, ಪರಮಾಣು ಒಪ್ಪಂದ ಅಪಾಯಕ್ಕೆ ಸಿಲುಕುತ್ತದೆ ಎಂದು ಅಮೆರಿಕ ಹೇಳಿತ್ತು. ಆದರೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 'ಏನೂ ಮಾಡುವುದಿಲ್ಲ, ನಾವು ಬೇರೆಯವರ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡುವುದಿಲ್ಲ, ನಮ್ಮ ಸ್ವಂತ ಹಿತಾಸಕ್ತಿಯಿಂದ ನಮಗೆ ಮಾರ್ಗದರ್ಶನ ನೀಡಲಾಗುವುದು ಎಂದಿದ್ದರು ಎಂದು ಹೇಳಿದ್ದಾರೆ.
ಆಗಿನ ಪ್ರಧಾನ ಮಂತ್ರಿಗಳು ಅಗತ್ಯವಿದ್ದಾಗ ಮಾತನಾಡುತ್ತಿದ್ದರು. ಅಗತ್ಯವಿಲ್ಲದಿದ್ದಾಗ ಮೌನವಾಗಿದ್ದರು. ಆದರೆ ಈಗಿನ ಪ್ರಧಾನಿ ಅಗತ್ಯವಿದ್ದಾಗ ಮಾತನಾಡುವುದಿಲ್ಲ ಮತ್ತು ಅಗತ್ಯವಿಲ್ಲದಿದ್ದಾಗ ಮಾತನಾಡುತ್ತಾರೆ, ಅದು ಅವರ ಗುಣ ಎಂದು ಕಿಡಿಕಾರಿದ್ದಾರೆ.
ಶ್ರೀಲಂಕಾ ಕರಾವಳಿಯ ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನ್ ಯುದ್ಧನೌಕೆಯನ್ನು ಹೊಡೆದುರುಳಿಸಿದ್ದು, ಅನೇಕ ಜನ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಒಂದು ಮಾತನಾಡಿಲ್ಲ. ಗಾಜಾದಲ್ಲಿ 72,000 ಜನರು ಸತ್ತರು, ಇರಾನ್ನ ಶಾಲೆಯಲ್ಲಿ ಹುಡುಗಿಯರು ಕೊಲ್ಲಲ್ಪಟ್ಟರು. ನಮಗೆ ಹೇಳಲು ಏನೂ ಇಲ್ಲ. ಪ್ರಜಾಪ್ರಭುತ್ವದ ತಾಯಿಯಾದ ನಮ್ಮಂತಹ ಮಹಾನ್ ದೇಶಕ್ಕೆ ಇದು ದುಃಖಕರವಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.

