ಬದಿಯಡ್ಕ: ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಾಸರಗೋಡಿಗೆ ಆಗಮಿಸಿದ್ದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಡನೀರು ಮಠಕ್ಕೆ ಭೇಟಿನೀಡಿ ಶ್ರೀ ಸಚ್ಛಿದಾನಂದ ಭಾರತೀ ಶ್ರೀಗಳ ಆಶೀರ್ವಾದ ಸಹಿತ ಫಲ ಮಂತ್ರಾಕ್ಷತೆ ಪಡೆದುಕೊಂಡರು.
ತೇಜಸ್ವಿ ಸೂರ್ಯ ಅವರನ್ನು ಶ್ರೀಮಠದ ವತಿಯಿಂದ ಮಠದ ಕಾರ್ಯದರ್ಶಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ ಬರಮಾಡಿಕೊಮಡರು. ಬಳಿಕ ಸಮಕಾಲೀನ ರಾಜಕೀಯ ಬೆಳವಣಿಗೆ ಕುರಿತು ಶ್ರೀಗಳ ಜತೆ ಅವರು ಮಾತುಕತೆ ನಡೆಸಿದರು. ಈ ಸಂದರ್ಭ ತೇಜಸ್ವಿ ಸೂರ್ಯ ಅವರನ್ನು ಶ್ರೀಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಮುದ್ರಾಂಕಿತ ಶೇಷವಸ್ತ್ರ ಸಹಿತ ಪ್ರಸಾದವನ್ನಿತ್ತು ಶ್ರೀಗಳು ಗೌರವಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಮಹೇಶ ವಳಕುಂಜ ಮೊದಲಾದವರು ಉಪಸ್ಥಿತರಿದ್ದರು.



