ರಾಯವರಂ: ಧಗಧಗನೆ ಹೊತ್ತಿ ಉರಿಯುತ್ತಿದ್ದ ಬಸ್, ಅದರೊಳಗೆ ಆವರಿಸಿದ್ದ ದಟ್ಟಹೊಗೆ, ಬೆಂಕಿ ಹಾಗೂ ಉಸಿರುಗಟ್ಟಿಸುವ ಹೊಗೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರು, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೀವ ಕಳೆದುಕೊಂಡ ಪ್ರಯಾಣಿಕರು.
ರಾಯವರಂ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಗ್ನಿ ಅವಘಡದ ದಾರುಣ ದೃಶ್ಯಗಳಿವು.
ಸುಟ್ಟು ಕರಕಲಾಗಿದ್ದ ಅನೇಕ ಶವಗಳು ರಸ್ತೆಯಲ್ಲಿ ಬಿದ್ದಿದ್ದವು. ನಂತರ, ಅವುಗಳನ್ನು ಆಂಬುಲೆನ್ಸ್ಗಳೊಳಗೆ ಇರಿಸಲಾಯಿತು. ಒಂದು ಶವದ ಪಕ್ಕೆಲುಬು ಕೂಡ ಗೋಚರಿಸಿದ್ದು, ಬೆಂಕಿಯ ತೀವ್ರತೆಯನ್ನು ಸೂಚಿಸುತ್ತಿತ್ತು.
'ನಾವು ಮೂವರು ಬಸ್ನಲ್ಲಿ ಹಿಂದಿನಿಂದ ಐದನೇ ಸಾಲಿನಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಆಸನಗಳಿಂದ ಬಿದ್ದೆವು. ನಮ್ಮೊಂದಿಗಿದ್ದ ಹುಡುಗ, 'ಚಿಕ್ಕಮ್ಮ ನಾವು ಸಾಯುತ್ತೇವೆ' ಎಂದ. ಆ ಬಳಿಕ, ಆತ ಏನಾದ ಎಂಬುದು ಗೊತ್ತಾಗಲಿಲ್ಲ' ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ತಾವು ಅನುಭವಿಸಿದ ಭಯಾನಕ ಕ್ಷಣಗಳನ್ನು ವಿವರಿಸಿದರು.
'ಬಸ್ನೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಉಸಿರಾಡಲು ಕಷ್ಟವಾಯಿತು. ಎಲ್ಲೆಡೆ ಕತ್ತಲೆ ಆವರಿಸಿತ್ತು. ಬೆಂಕಿಯನ್ನು ಕಂಡಾಕ್ಷಣ ಬಸ್ನಿಂದ ಹೊರಗೆ ಜಿಗಿದೆ' ಎಂದು ಬಸ್ನ ಮೊದಲ ಆಸನದಲ್ಲಿ ಕುಳಿತಿದ್ದ ಯುವಕನೊಬ್ಬ ತಿಳಿಸಿದ.
'ನಾನು ಫೋನ್ ನೋಡುತ್ತಿದ್ದೆ. ಅಪಘಾತದ ಸಮಯದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆದು ಒಬ್ಬ ಮಹಿಳೆಯು ಹೊರಗೆ ಹೋಗಲು ಸಹಾಯ ಮಾಡಿದೆ' ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

