HEALTH TIPS

ಜಾತ್ಯತೀತ ಸಿದ್ಧಾಂತದಲ್ಲಿ ರಾಜಿ ಇಲ್ಲ ಎನ್ನುತ್ತಲೇ ಎನ್‌ಡಿಎ ಸೇರಲ್ಲ ಎಂದ ವಿಜಯ್

 ಎಐಎಡಿಎಂಕೆ ಹಾಗೂ ಬಿಜೆಪಿ ಜೊತೆ ಮೈತ್ರಿ ಸಾಧ್ಯತೆಯ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖಸ್ಥ ಹಾಗೂ ನಟ ವಿಜಯ್‌ ತೆರೆ ಎಳೆದಿದ್ದಾರೆ. ತಮ್ಮ ಜಾತ್ಯತೀತ ಅಸ್ಮಿತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. 


ತಮ್ಮ ರಾಜಕೀಯ ಸಿದ್ಧಾಂತವನ್ನು ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಎಂಬುದನ್ನು ಪುನರುಚ್ಚರಿಸಿರುವ ಅವರು, ಈ ಸಂದೇಶವನ್ನು ಸಾರಲು, ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್‌ ಕೂಟದ ಸಮಾರಂಭವನ್ನು ವೇದಿಕೆ ಮಾಡಿಕೊಂಡಿದ್ದಾರೆ.

ʼಆಡಳಿತಾರೂಢ ಡಿಎಂಕೆಯನ್ನು ಅಧಿಕಾರದಿಂದ ಇಳಿಸುವ ಸಲುವಾಗಿ ಬಿಜೆಪಿಯು ವಿಜಯ್‌ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಆ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆಗಳು ನಡೆಯುತ್ತಿವೆʼ ಎಂಬ ವದಂತಿಗಳು ಹರಿದಾಡಿದ್ದವು.

ಮಾಮಲ್ಲಪುರಂನ ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಮಾತನಾಡಿರುವ ವಿಜಯ್‌, ʼನಾವು ಪಕ್ಷವನ್ನು ಆರಂಭಿಸಿದ ಹೊಸತರಲ್ಲಿ ನಮ್ಮ ಎದುರಾಳಿಗಳು ನಮ್ಮನ್ನು ಆ ತಂಡದ ಭಾಗವಾಗಿದ್ದೀವಿ. ಈ ತಂಡದ ಭಾಗವಾಗಿದ್ದೀವಿ ಎಂದು ಬ್ರಾಂಡ್‌ ಮಾಡಲು ಪ್ರಯತ್ನಿಸಿದ್ದರು. ಯಾವಾಗ ವಿಜಯ್‌ ಜೊತೆಗಿರುವ ಜನರ ಬಳಗವನ್ನು ನೋಡಿದರೋ, ಆಗ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು, ಇವರೊಂದಿಗೆ ಕೈಜೋಡಿಸಬಹುದು ಎಂಬಂತಹ ಸುದ್ದಿಗಳನ್ನು ಹರಡಲಾರಂಭಿಸಿದರುʼ ಎಂದು ವ್ಯಂಗ್ಯವಾಡಿದ್ದಾರೆ. ಹಾಗೆಯೇ, ʼಈ ಸುಳ್ಳು ಸುದ್ದಿಗಳು ನಿಮ್ಮಲ್ಲಿ ಗೊಂದಲ ಮೂಡಿಸಬಹುದುʼ ಎಂದು ಜನರನ್ನು ಎಚ್ಚರಿಸಿದ್ದಾರೆ.

ʼನಮ್ಮ ಪಕ್ಷವು ಸದಾ ಜಾತ್ಯತೀತವಾಗಿರಲಿದೆ. ಜಾತ್ಯತೀತ, ಸಾಮಾಜಿಕ ನ್ಯಾಯ ಸಿದ್ಧಾಂತಗಳನ್ನು ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರ ಬಲದಿಂದಲೇ ಸರ್ಕಾರ ರಚಿಸುತ್ತೇವೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾರ ಜೊತೆಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ. ವದಂತಿಗಳಿಗೆ ಯಾರೂ ಕಿವಿಕೊಡಬೇಡಿ. ದೇವರ ದಯೆಯಿಂದ ನಾವು ಗುರಿ ಸಾಧಿಸುತ್ತೇವೆʼ ಎಂದಿದ್ದಾರೆ.

ವಿಜಯ್‌ ಅವರ ಈ ಹೇಳಿಕೆಯಿಂದಾಗಿ ತಮಿಳುನಾಡಿನಲ್ಲಿ, ಡಿಎಂಕೆ, ಎಐಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ, ಟಿವಿಕೆ ಹಾಗೂ ತಮಿಳಗ ನ್ಯಾಷನಲಿಸ್ಟ್‌ ನಾಮ್‌ ತಮಿಳರ್‌ ಕಚ್ಚಿ ನಡುವಣ ಚತುಷ್ಕೋನ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಂತಾಗಿದೆ.

ವಿಜಯ್‌ ಅವರು ಎನ್‌ಡಿಎ ಮೈತ್ರಿಕೂಟದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಡಿಎಂಕೆ ಹೊಂದಾಣಿಕೆ ಮಾಡಿಕೊಂಡ ನಂತರ, ಟಿವಿಕೆ ಪಕ್ಷ ಎನ್‌ಡಿಎ ಸೇರುವ ಕುರಿತು ಊಹಾಪೋಹಗಳು ಜೋರಾಗಿವೆ. ಅದರಲ್ಲೂ, ಕರೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಎದುರು ವಿಜಯ್‌ ಅವರು ಮೂರನೇ ಬಾರಿ ವಿಚಾರಣೆಗೆ ಹಾಜರಾದ ನಂತರವಂತೂ ಆ ವದಂತಿಗಳು ಇನ್ನಷ್ಟು ತೀವ್ರಗೊಂಡಿವೆ.

'50:50ರ ಅನುಪಾತದಲ್ಲಿ ಟಿವಿಕೆಗೆ ಅರ್ಧದಷ್ಟು ಸೀಟು ಬಿಟ್ಟುಕೊಡಲಾಗುವುದು. ಸರದಿಯಂತೆ ಎರಡೂವರೆ ವರ್ಷದ ಅವಧಿಗೆ ವಿಜಯ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂಬುದಾಗಿ ಮತ್ತೊಂದು ಪಕ್ಷದಿಂದ ಆಫರ್‌ ಬಂದಿದೆ. ಆದರೆ, ಈ ಪ್ರಸ್ತಾವವನ್ನು ವಿಜಯ್‌ ಒಪ್ಪಿಕೊಂಡಿಲ್ಲ' ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್‌ ಅರ್ಜುನ ಇತ್ತೀಚೆಗೆ ಹೇಳಿದ್ದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್‌ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries