ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದನ್ನು ಕಟುವಾದ ಮಾತುಗಳಿಂದ ಖಂಡಿಸಿರುವ ಸುಪ್ರೀಂ ಕೋರ್ಟ್, 'ಅತ್ಯಾಚಾರಕ್ಕೆ ಒಳಗಾಗಿರುವವರು ಹಾಗೂ ಅವರ ಕುಟುಂಬ ಸದಸ್ಯರ ಹೆಸರುಗಳನ್ನು ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖಿಸದೇ ಇರುವುದನ್ನು ಖಾತ್ರಿಪಡಿಸಬೇಕು' ಎಂದು ಎಲ್ಲ ಹೈಕೋರ್ಟ್ಗಳಿಗೆ ನಿರ್ದೇಶನ ನೀಡಿದೆ.
'ಈ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಪಾಲನೆ ಮಾಡುವಲ್ಲಿ ನ್ಯಾಯಾಲಯಗಳು ತೋರುತ್ತಿರುವ ಉದಾಸೀನತೆ ಹಾಗೂ ಇಂತಹ ಪ್ರಕರಣಗಳಿಂದ ಕಂಡುಬರುವ ಕಳಂಕ ಕುರಿತಂತೆ ಅರಿವಿನ ಕೊರತೆ ಇಂತಹ ಸಮಸ್ಯೆಗಳಿಗೆ ಕಾರಣ' ಎಂದೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
9 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ತಪ್ಪಿತಸ್ಥ ಎಂದು ಘೋಷಿಸಿ ನೀಡಲಾಗಿದ್ದ ಆದೇಶವನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ ವೇಳೆ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಹಾಗೂ ಎನ್.ಕೋಟಿಶ್ವರ್ ಸಿಂಗ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರ ಹೆಸರುಗಳನ್ನು ಆದೇಶಗಳಲ್ಲಿ ಉಲ್ಲೇಖಿಸಬಾರದು ಎಂಬುದಕ್ಕೆ ಸಂಬಂಧಿಸಿದ ತೀರ್ಪಿನ ಪ್ರತಿಯನ್ನು ಹೈಕೋರ್ಟ್ಗಳ ರಜಿಸ್ಟ್ರಾರ್ ಜನರಲ್ಗಳಿಗೆ ಕಳುಹಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ನ್ಯಾಯಪೀಠ ಹೇಳಿದ್ದು..
* ಅತ್ಯಾಚಾರ ಪ್ರಕರಣಗಳ ಸಂತ್ರಸ್ತೆ ಹೆಸರನ್ನು ಅಥವಾ ಸಂತ್ರಸ್ತೆಯನ್ನು ಗುರುತಿಸುವುದಕ್ಕೆ ನೆರವಾಗಬಲ್ಲ ವಿವರಗಳನ್ನು ಯಾವುದೇ ವ್ಯಕ್ತಿ ಮುದ್ರಿಸಬಾರದು ಅಥವಾ ಮುದ್ರಣ ಮಾಧ್ಯಮ ಎಲೆಕ್ಟ್ರಾನಿಕ್ ಮಾಧ್ಯಮ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಾರದು ಎಂದು 2018ರಲ್ಲಿ(ನಿಪುಣ್ ಸಕ್ಸೇನಾ ಪ್ರಕರಣ) ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ
* ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಅಪರಾಧ ಎಂಬ ಅವಕಾಶವನ್ನು 1983ರಲ್ಲಿ ತಂದ ತಿದ್ದುಪಡಿ ಮೂಲಕ ಐಪಿಸಿ ಸೆಕ್ಷನ್ 376ರಲ್ಲಿ ಸೇರಿಸಲಾಗಿದೆ. ಈ ತಿದ್ದುಪಡಿಗೂ ಮುನ್ನ ಅತ್ಯಾಚಾರ ಸಂತ್ರಸ್ತೆಯ ಹೆಸರು ಅಥವಾ ವಿವರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ
* ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನು ಇತರ ಸಾಕ್ಷಿದಾರರಂತೆಯೇ ಪರಿಗಣಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಆಕೆಯ ಹೆಸರನ್ನು ಮುಕ್ತವಾಗಿ ಉಲ್ಲೇಖಿಸಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ

