ನವದೆಹಲಿ: ತಾನು ನೀಡದೇ ಇರುವಂತಹ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆ(ಎ.ಐ) ಬಳಸಿ ಸೃಷ್ಟಿಸಲಾಗುತ್ತಿದ್ದು, ದಾವೆದಾರರು ಹಾಗೂ ವಕೀಲರು ಇಂತಹ ತೀರ್ಪುಗಳನ್ನು ಉಲ್ಲೇಖಿಸುತ್ತಿರುವ 'ಅಪಾಯಕಾರಿ' ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
'ಎ.ಐ ಬಳಸಿ ಸೃಷ್ಟಿಸಲಾದ ತೀರ್ಪುಗಳನ್ನು ಉಲ್ಲೇಖ ಮಾಡುವ ಪ್ರವೃತ್ತಿ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ವ್ಯಾಪಕವಾಗುತ್ತಿದೆ' ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಲ್ ಹಾಗೂ ವಿಜಯ ಬಿಷ್ಣೋಯಿ ಅವರು ಇದ್ದ ಪೀಠ ಹೇಳಿದೆ.
ಕಂಪನಿಯೊಂದರ ನಿರ್ದೇಶಕ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದಾಗ ಬಾಂಬೆ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ತೆಗೆದುಹಾಕುವ ವೇಳೆ ಪೀಠವು ಈ ಮಾತು ಹೇಳಿದೆ.
ಅರ್ಜಿದಾರ ಸಲ್ಲಿಸಿದ್ದ ಬಾಂಬೆ ಹೈಕೋರ್ಟ್ನದ್ದು ಎನ್ನಲಾದ ಆದೇಶ ಹಾಗೂ ಅದರಲ್ಲಿನ ಅವರ ನಿವೇದನೆಗಳನ್ನು ಚಾಟ್ಜಿಪಿಟಿ ಅಥವಾ ಇಂಥದೇ ಎ.ಐ ತಂತ್ರಾಂಶದ ನೆರವಿನಿಂದ ಸಿದ್ಧಪಡಿಸಲಾಗಿದೆ ಎಂಬುದು ಕಂಡುಬರುತ್ತದೆ ಎಂದು ಪೀಠ ಹೇಳಿದೆ.

