ಮಾರ್ಚ್ 15ರಂದು ಪಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ರಿತೇಶ್ ಕುಮಾರ್ ಸಿಂಗ್ ಎಂಬುವವರು ತೆಗೆದುಕೊಂಡ ಊಟದ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಆ ವಿಡಿಯೊದಲ್ಲಿ ಹುಳುಗಳು ಇರುವುದು ಪತ್ತೆಯಾಗಿದೆ.
ವಿಡಿಯೊ ತುಣುಕಿನಲ್ಲಿ, ರಿತೇಶ್ ಕುಮಾರ್ ಪಡೆದ ಮೊಸರಿನ ಬಾಕ್ಸ್ ಕಡೆಗೆ ಕ್ಯಾಮೆರಾ ತಿರುಗಿಸಿದಾಗ ಅದರಲ್ಲಿ ಹುಳುಗಳು ಇರುವುದು ಸ್ಪಷ್ಟವಾಗಿ ಕಂಡುಬಂದಿದೆ. ಕೂಡಲೆ ರೈಲಿನ ಆಹಾರದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ರೈಲ್ವೆ ವ್ಯವಸ್ಥಾಪಕರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ.
ಇನ್ನೂ ರಿತೇಶ್ ದೂರು ಆಧರಿಸಿ ಪರಿಶೀಲನೆಗೆ ಬಂದ ರೈಲ್ವೆ ಅಧಿಕಾರಿಗಳು ಕೂಡ ಹುಳುಗಳು ಇರುವುದನ್ನು ಖಚಿತಪಡಿಸಿದ್ದಾರೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ಇತರೆ ಪ್ರಯಾಣಿಕರು ತಪಾಸಣೆಯ ಬಳಿಕ ಮತ್ತು ಹುಳುಗಳು ಇರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರಯಾಣಿಕ ಹಂಚಿಕೊಂಡ ವಿಡಿಯೊಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ, ಎಚ್ಚೆತ್ತುಕೊಂಡ ರೈಲ್ವೆ ಸಚಿವಾಲಯವು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವುದಾಗಿ ಭರವಸೆ ನೀಡಿದೆ.
'2026ರ ಮಾರ್ಚ್ 15 ರಂದು ರೈಲು ಸಂಖ್ಯೆ 21896 (ಪಟ್ನಾ - ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್) ನಲ್ಲಿ ಪ್ರಯಾಣಿಕರೊಬ್ಬರು ಸಲ್ಲಿಸಿದ ಆಹಾರದ ಗುಣಮಟ್ಟದ ಕುರಿತಾದ ದೂರನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗಿದೆ. ಐಆರ್ಸಿಟಿಸಿಗೆ ₹10 ಲಕ್ಷ ದಂಡ ಹಾಗೂ ಆಹಾರ ಪೂರೈಕೆದಾರರಿಗೆ ₹50 ಲಕ್ಷ ದಂಡದ ಜೊತೆಗೆ, ಅವರ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲು ಆದೇಶಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟವು ನಮ್ಮ ಪ್ರಮುಖ ಆದ್ಯತೆಯಾಗಿದೆ' ಎಂದು ಸಚಿವಾಲಯ ತಿಳಿಸಿದೆ.

