ನವದೆಹಲಿ: ಹಿರಿಯ ಪತ್ರಕರ್ತ, ಪದ್ಮಭೂಷಣ ಪುರಸ್ಕೃತ ಎಚ್.ಕೆ. ದುವಾ (88) ಅವರು ಬುಧವಾರ ನಿಧನರಾಗಿದ್ದಾರೆ.
ಎಚ್.ಕೆ ದುವಾ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ಶಶಿ ತರೂರ್ ಸೇರಿದಂತೆ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ದುವಾ ಅವರು ತೀಕ್ಷ್ಣ ರಾಜಕೀಯ ವಿಶ್ಲೇಷಕರಾಗಿ ಮತ್ತು ಸಂಪಾದಕೀಯ ಸ್ವಾತಂತ್ರ್ಯದ ಬದ್ಧತೆಗೆ ದುವಾ ಹೆಸರುವಾಸಿಯಾಗಿದ್ದರು. 2009ರಿಂದ 2015ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತೆಯ ಚರ್ಚೆಗಳಿಗೆ ಮಹತ್ವದ ಕೊಡುಗೆ ನೀಡಿದ್ದರು.
'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆ ಸಂಪಾದಕರಾಗಿ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ದ ಟ್ರಿಬ್ಯುನ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ದುವಾ ಕಾರ್ಯನಿರ್ವಹಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ಎಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರಿಗೆ ದುವಾ ಅವರು ಮಾಧ್ಯಮ ಸಲಹೆಗಾರರಾಗಿದ್ದರು. 2001ರಿಂದ 2003ರವರೆಗೆ ಡೆನ್ಮಾರ್ಕ್ನಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾಗಿದ್ದ ದುವಾ ಅವರು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಮತ್ತು ಗೃಹ ಸಚಿವಾಲಯದ ಸಮಾಲೋಚನಾ ಸಮಿತಿಯ ಭಾಗವಾಗಿದ್ದರು.
ದುವಾ ಅವರು ಪದ್ಮಭೂಷಣ ಪುರಸ್ಕೃತರಾಗಿದ್ದರು ಮತ್ತು ಪಂಜಾಬ್ ಹಾಗೂ ಕುರುಕ್ಷೇತ್ರ ವಿಶ್ವವಿದ್ಯಾಲಯಗಳಿಂದ ಡಿ.ಲಿಟ್ ಗೌರವವನ್ನು ಪಡೆದಿದ್ದಾರೆ.

