ನವದೆಹಲಿ: 'ದೇಶಗಳ ನಡುವಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ಉದ್ದೇಶಕ್ಕೆ ಪ್ರಸ್ತುತ, ಸೇನೆ ಬಳಕೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಕಾನೂನು ಎಂಬುದು ಕೂಡ 'ಜಂಗಲ್ ಕಾಯ್ದೆ'ಯಂತಾಗಿದೆ' ಎಂದು ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ಅಬ್ದುಲ್ಲಾ ಎಂ.ಅಬು ಶಾವೇಶ್ ಹೇಳಿದ್ದಾರೆ.
'ಅಪಾರ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ರಾಷ್ಟ್ರಗಳದ್ದೇ ಮೇಲುಗೈ ಆಗುತ್ತಿದ್ದು, ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳ ಭವಿಷ್ಯವನ್ನೇ ಈ ವಿದ್ಯಮಾನಗಳು ಮಸಕು ಮಾಡುತ್ತಿವೆ' ಎಂದು ವಿಶ್ಲೇಷಿಸಿದ್ದಾರೆ.
ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಮೆರಿಕ-ಇರಾನ್ ಯುದ್ಧವನ್ನು ಪ್ರಸ್ತಾಪಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
'ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಬಲಶಾಲಿಯಾಗಿರುವ ದೇಶಗಳು ನೀಡುತ್ತಿರುವ ಹೇಳಿಕೆಗಳು ಕಳವಳ ಮೂಡಿಸುವಂತಿವೆ. ಸಂಘರ್ಷ ಏರ್ಪಟ್ಟ ಇಂತಹ ಸಂದರ್ಭಗಳಲ್ಲಿ, ಮಾತುಕತೆಗೆ ಬಾಗಿಲು ಮುಚ್ಚಿದೆ ಎಂಬುದನ್ನು ಈ ಹೇಳಿಕೆಗಳು ಸ್ಪಷ್ಟವಾಗಿ ಸೂಚಿಸುತ್ತಿವೆ' ಎಂದು ಶಾವೇಶ್ ಹೇಳಿದ್ದಾರೆ.
'ಇರಾನ್-ಅಮೆರಿಕ ಯುದ್ಧದಿಂದ ಪ್ಯಾಲೆಸ್ಟೀನಿಯನ್ನರಿಗೆ ಮಾತ್ರ ಸಮಸ್ಯೆಯಾಗುವುದಿಲ್ಲ. ಭವಿಷ್ಯದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ' ಎಂದಿದ್ದಾರೆ.
ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ಇರಾನ್ ಬೆಂಬಲಿಸುವುದನ್ನು ಸಮರ್ಥಿಸಿಕೊಂಡ ಶಾವೇಶ್,'ಇಸ್ರೇಲ್ ದಾಳಿಗೆ ಬಹು ಆಯಾಮದಲ್ಲಿ ಪ್ರತಿರೋಧ ಒಡ್ಡಬೇಕಾಗುತ್ತದೆ. ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳಿಗೆ ನೀಡುವ ಬೆಂಬಲವು ಇಂತಹ ಪ್ರತಿರೋಧದ ಭಾಗವೇ ಆಗಿದೆ' ಎಂದು ವಿವರಿಸಿದ್ದಾರೆ.
-ಅಬ್ದುಲ್ಲಾ ಎಂ.ಅಬು ಶಾವೇಶ್, ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿಐತಿಹಾಸಿಕವಾಗಿ ಭಾರತವು ಪ್ಯಾಲೆಸ್ಟೀನ್ಗೆ ಬೆಂಬಲ ನೀಡುವ ಜೊತೆಗೆ ಪಶ್ಚಿಮ ಏಷ್ಯಾದೊಂದಿಗೆ ಸಮತೋಲಿತ ಸಂಬಂಧ ಕಾಯ್ದುಕೊಂಡಿದೆ. ಪ್ಯಾಲೆಸ್ಟೀನ್ ವಿಚಾರದಲ್ಲಿ ಎರಡು ದೇಶ ರಚಿಸುವ ಪರಿಹಾರಸೂತ್ರವನ್ನೂ ಬೆಂಬಲಿಸಿದೆ.

