ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಇತ್ಯರ್ಥಗೊಳಿಸುವಲ್ಲಿ ಪಾಕಿಸ್ತಾನ ಸಹ ಮಧ್ಯಸ್ಥಿಕೆ ವಹಿಸಿದೆ ಎನ್ನುವುದು ನಿಜವಾಗಿದ್ದರೆ, ಭಾರತಕ್ಕೆ ಹಿನ್ನಡೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
'ಸೇನಾಪಡೆಯ ಆಪರೇಷನ್ ಸಿಂಧೂರ್ ಯಶಸ್ಸಿನ ಹೊರತಾಗಿಯೂ ದುಃಖಕರ ವಿಷಯ ಎಂದರೇ, ಪಾಕಿಸ್ತಾನದ ರಾಜತಾಂತ್ರಿಕತೆಯು ಮೋದಿ ಸರ್ಕಾರಕ್ಕಿಂತಲೂ ಶ್ರೇಷ್ಠವಾದುದು' ಎಂದಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನವು ಒಂದು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯ ಆಗಿದ್ದರೆ, ಇದಕ್ಕೆ ಸ್ವಯಂಘೋಷಿತ ವಿಶ್ವಗುರುವೇ ಕಾರಣ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಉಲ್ಲೇಖಿಸಿದ್ದಾರೆ.
ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅನಿಶ್ಚಿತತೆಯಲ್ಲಿದ್ದ ಪಾಕಿಸ್ತಾನಕ್ಕೆ ಇದೀಗ ನೂತನ ಸ್ಥಾನಮಾನ ಸಿಕ್ಕಂತಾಗಿದೆ ಎಂದಿದ್ದಾರೆ.

