ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯವೈಖರಿ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಸುವಂತೆ ವಿರೋಧಪಕ್ಷಗಳ ಸಂಸದರು ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷಗಳ ನಾಯಕರ ಸಹಿಯನ್ನು ಒಳಗೊಂಡ ಪತ್ರದಲ್ಲಿ, ಕಳೆದ 16 ವರ್ಷಗಳಲ್ಲಿ ಈ ಎರಡು ಸಚಿವಾಲಯಗಳ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ.
29 ಸಚಿವಾಲಯಗಳ ಬಗ್ಗೆ 2010ರಿಂದ ಚರ್ಚೆ ನಡೆದಿಲ್ಲ ಎಂದೂ ಹೇಳಲಾಗಿದೆ.
ಪ್ರಸಕ್ತ ಜಾಗತಿಕ ವಿದ್ಯಮಾನ, ಇಂಧನ ಬಿಕ್ಕಟ್ಟು ಮತ್ತು ಭಾರತದ ಎದುರಿಗಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆಗೆ ಅವಕಾಶ ನೀಡಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.
ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಸ್ಪಿ, ಸಿಪಿಎಂ, ಸಿಪಿಐ, ಎಎಪಿ, ಜೆಎಂಎಂ, ಆರ್ಜೆಡಿ,, ಎನ್ಸಿಪಿ (ಎಸ್ಪಿ), ಶಿವಸೇನಾ (ಉದ್ಧವ್ ಬಣ), ಎನ್ಸಿ, ಐಯುಎಂಎಲ್ ನಾಯಕರು ಮತ್ತು ಪಕ್ಷೇತರ ಸಂಸದ ಕಪಿಲ್ ಸಿಬಲ್ ಸೇರಿದಂತೆ ಸುಮಾರು ನೂರು ಮಂದಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಬಜೆಟ್ ಅಧಿವೇಶನದ ಆರಂಭದಿಂದಲೂ ಈ ಎರಡೂ ಸಚಿವಾಲಯಗಳ ಕುರಿತು ಚರ್ಚೆಗೆ ವಿರೋಧಪಕ್ಷಗಳ ಸಂಸದರು ಆಗ್ರಹಿಸುತ್ತಿದ್ದಾರೆ. ಮೇಲ್ಮನೆಯಲ್ಲಿ ಈವರೆಗೆ ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಬಗ್ಗೆ ಚರ್ಚೆ ನಡೆದಿದೆ.
ಜನ ವಿಶ್ವಾಸ ಮಸೂದೆ ವಾಪಸ್ ನವದೆಹಲಿ: ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ-2025 ಅನ್ನು ಲೋಕಸಭೆಯಿಂದ ಸರ್ಕಾರ ಮಂಗಳವಾರ ಹಿಂಪಡೆಯಿತು. ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಮಸೂದೆಯನ್ನು ಹಿಂಪಡೆದರು. ಮಸೂದೆಯ ಪರಿಶೀಲನೆಗೆ ರಚನೆಯಾಗಿರುವ ಆಯ್ಕೆ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಂಡ ಬಳಿಕ ಮತ್ತೆ ಅದನ್ನು ಮಂಡಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಮೀಸಲು: ಸರ್ವಪಕ್ಷಗಳ ಸಭೆಗೆ ಖರ್ಗೆ ಒತ್ತಾಯ ಮಹಿಳಾ ಮೀಸಲಾತಿ ಕಾಯ್ದೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆಯನ್ನು ಶೀಘ್ರವೇ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ತಿಳಿಸಿದ್ದಾರೆ. ರಿಜಿಜು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು 'ನಾರಿ ಶಕ್ತಿ ವಂದನಾ ಅಧಿನಿಯಮ' ಕಾಯ್ದೆಯನ್ನು 2023ರ ಸೆಪ್ಟೆಂಬರ್ನಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು. ಕಾಯ್ದೆಯ ನೀಲನಕ್ಷೆ ರೂಪಿಸಲು ಸರ್ವ ಪಕ್ಷಗಳ ಸಭೆ ಕರೆಯುವ ಅಗತ್ಯವಿದೆ' ಎಂದು ಹೇಳಿದ್ದಾರೆ.
ಎಂಟು ಸಂಸದರ ಅಮಾನತು ಆದೇಶ ವಾಪಸ್ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಅಶಿಸ್ತಿನಿಂದ ವರ್ತಿಸಿದಕ್ಕಾಗಿ ವಿರೋಧ ಪಕ್ಷಗಳ ಎಂಟು ಸಂಸದರನ್ನು ಅಮಾನತು ಮಾಡಿದ್ದ ಆದೇಶವನ್ನು ಮಂಗಳವಾರ ವಾಪಸ್ ಪಡೆಯಲಾಗಿದೆ. ಫಲಕಗಳು ಪೋಸ್ಟರ್ಗಳು ಫೋಟೊಗಳು ಅಥವಾ ಎಐ ಚಿತ್ರಗಳನ್ನು ಸಂಸತ್ ಆವರಣ ಅಥವಾ ಸದನದ ಒಳಗೆ ಪ್ರದರ್ಶಿಸುವಂತಿಲ್ಲ ಎಂದು ಬಿರ್ಲಾ ಅವರು ಎಚ್ಚರಿಕೆ ನೀಡಿದರು. ಬಳಿಕ ಅಮಾನತು ಆದೇಶ ವಾಪಸ್ ಪಡೆಯುವ ನಿರ್ಣಯವನ್ನು ಲೋಕಸಭೆಯು ಧ್ವನಿಮತದ ಮೂಲಕ ಅಂಗೀಕರಿಸಿತು. ಫೆಬ್ರುವರಿ 3ರಂದು ಎಂಟು ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿತ್ತು.

