ರಾಯವರಂ: ನಿನ್ನೆ ನಸುಕಿನ ಜಾವ ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಸಂಭವಿಸಿದ ಖಾಸಗಿ ಬಸ್ ಬೆಂಕಿ ದುರಂತದಲ್ಲಿ ಮೃತರಾದ ಹದಿನಾಲ್ಕೂ ಜನರ ಗುರುತು ಇನ್ನೂ ಪತ್ತೆಯಾಗಿಲ್ಲ.
ಡಿಎನ್ಎ ಪರೀಕ್ಷೆ ಬಳಿಕವೇ ಮೃತ ದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಮಾರ್ಕಾಪುರಂ ಎಸ್ಪಿ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 14 ಪ್ರಯಾಣಿಕರು ಸಜೀವ ದಹನವಾಗಿದ್ದರು. ಗಾಯಗೊಂಡಿರುವ 28 ಜನರಲ್ಲಿ ಐದು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಸಾವಿಗೀಡಾದವರಲ್ಲಿ ಐದು ತಿಂಗಳ ಶಿಶು ಮತ್ತು ಮಹಿಳೆಯರು ಸೇರಿದ್ದಾರೆ.
ಮೃತರ ಡಿಎನ್ಎ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ಇಂದು ಸಂಜೆ ವರದಿ ಕೈ ಸೇರುವ ನಿರೀಕ್ಷೆ ಇದೆ ಎಂದು ಎಸ್ಪಿ ವಿ. ಹರ್ಷವರ್ಧನ್ ರಾಜು ತಿಳಿಸಿದ್ದಾರೆ.
ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಸರ್ಕಾರವು ಈ ಅಪಘಾತದಲ್ಲಿನ ಮೃತರ ಕುಟುಂಬಗಳಿಗೆ ತಲಾ ₹5 ಪರಿಹಾರ ಘೋಷಿಸಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಏನಾಗಿತ್ತು?
ತೆಲಂಗಾಣದ ಜಗಿತ್ಯಾಲದಿಂದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಲಿಗಿರಿಗೆ ಹೊರಟಿದ್ದ 'ಸೀಟರ್-ಕಮ್-ಸ್ಲೀಪರ್'' ನಾನ್-ಎಸಿ ಬಸ್ ರಾಯವರಂ ಬಳಿ ಬೆಳಿಗ್ಗೆ 5.30ರಿಂದ 6 ಗಂಟೆ ನಡುವೆ ಅಪಘಾತ ಸಂಭವಿಸಿದೆ. ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ಗೆ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಪ್ಪರ್ನ ಡೀಸೆಲ್ ಟ್ಯಾಂಕ್ಗೆ ಹಾನಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ವ್ಯಾಪಿಸಿದೆ. ದಟ್ಟ ಹೊಗೆಯಿಂದಾಗಿ ಕೆಲ ಪ್ರಯಾಣಿಕರು ಹೊರಬರುವ ಮುನ್ನವೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರು ಜಗಿತ್ಯಾಲ, ನೆಲ್ಲೂರು ಹಾಗೂ ಮಾರ್ಕಾಪುರಂ ಜಿಲ್ಲೆಗೆ ಸೇರಿದ್ದಾರೆ.

