ಮುಂಬೈ: 'ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕೆಡವಲಾದ ತಾತ್ಕಾಲಿಕ ಶೆಡ್ನಲ್ಲಿ ರಂಜಾನ್ ವೇಳೆ ನಮಾಜ್ಗೆ ಅವಕಾಶ ನೀಡುವಂತೆ ಕೋರಿ ಟ್ಯಾಕ್ಸಿ ಹಾಗೂ ಆಟೊರಿಕ್ಷಾ ಚಾಲಕರ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್, ಭದ್ರತೆಯು ಧಾರ್ಮಿಕತೆಯನ್ನು ಮೀರಿದ್ದಾಗಿದೆ' ಎಂದು ತಿಳಿಸಿದೆ.
'ಯಾರನ್ನು ಪ್ರಾರ್ಥನೆ ಮಾಡಲು ತಡೆಯುತ್ತಿಲ್ಲ. ಅರ್ಜಿದಾರರು ಕೇಳಿರುವ ಸ್ಥಳವು ಭದ್ರತೆಗೆ ಸಂಬಂಧಿಸಿದ್ದಾಗಿದೆ' ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
'ರಂಜಾನ್ ಎಂಬುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಪವಿತ್ರ ತಿಂಗಳಲ್ಲಿ ಯಾವುದೇ ಜಾಗದಲ್ಲಿ ನಮಾಜ್ ಸಲ್ಲಿಸುವುದು ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತೆಯು ಗರಿಷ್ಠ ಮಟ್ಟದಲ್ಲಿರಬೇಕು' ಎಂದು ನ್ಯಾಯಮೂರ್ತಿ ಬಿ.ಪಿ. ಕೊಲಾಬಾವಲ್ಲಾ, ನ್ಯಾಯಮೂರ್ತಿ ಫಿರ್ದೋಸ್ ಪೂನಿವಾಲ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಳೆದ ವರ್ಷ ಕೆಡವಲಾದ ಶೆಡ್ನಲ್ಲಿ ನಮಾಜ್ ಸಲ್ಲಿಸಲು ತಾತ್ಕಾಲಿಕವಾಗಿ ಅನುಮತಿ ನೀಡಬೇಕು ಎಂದು ಕೋರಿ ಟ್ಯಾಕ್ಸಿ-ರಿಕ್ಷಾ ಒಲಾ-ಉಬೆರ್ ಮೆನ್ಸ್ ಒಕ್ಕೂಟವು ಅರ್ಜಿ ಸಲ್ಲಿಸಿತ್ತು. ಮುಸಲ್ಮಾನರಿಗೆ ಅದೇ ಜಾಗದಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕು, ಇಲ್ಲವಾದರೆ ಬೇರೆ ಜಾಗದಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು.
ಕಳೆದ ವಾರ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಾರ್ಥನೆ ಸಲ್ಲಿಸಲು ಬೇರೆ ಯಾವುದಾದರೂ ಜಾಲ ಲಭ್ಯವಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುವಂತೆ ಪೊಲೀಸ್, ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
'ಏಳು ಸ್ಥಳಗಳನ್ನು ಪರಿಶೀಲಿಸಲಾಗಿತ್ತು. ದಟ್ಟಣೆ, ಭದ್ರತೆ ಹಾಗೂ ವಿಮಾನ ನಿಲ್ದಾಣ ಅಭಿವೃದ್ಧಿ ಸಂಬಂಧ ವಿಧಿಸಲಾಗಿರುವ ನಿರ್ಬಂಧದಿಂದ ಈ ಜಾಗಗಳನ್ನು ಅರ್ಜಿದಾರರಿಗೆ ಅವಕಾಶ ನೀಡಲು ಸಾಧ್ಯವಿಲ್ಲ' ಎಂದು ಅಧಿಕಾರಿಗಳು ಗುರುವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ವರದಿಯನ್ನು ಪರಿಶೀಲಿಸಿದ ನಂತರ, ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಇದು ವಿಮಾನ ನಿಲ್ದಾಣದ ಭದ್ರತೆಗೆ ಸಂಬಂಧಿಸಿದೆ ಎಂದು ಈ ವೇಳೆ ಸ್ಪಷ್ಟಪಡಿಸಿದೆ.
'ಅರ್ಜಿದಾರರು ಬೇರೆ ಸ್ಥಳವನ್ನು ಹುಡುಕಬೇಕಾಗುತ್ತದೆ. ಈಗಿರುವ ಸ್ಥಳದಿಂದ 1 ಕಿ.ಮೀ ಅಂತರದಲ್ಲಿ ಮದರಸಾ ಇದ್ದರೆ, ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬಹುದು' ಎಂದು ತಿಳಿಸಿದೆ.
'ಸುರಕ್ಷತಾ ಸಮಸ್ಯೆ ಒಳಗೊಳ್ಳುವುದರಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಪ್ರಾರ್ಥನಾ ಪ್ರದೇಶವನ್ನು ಹೊಂದಲು ಸಾಧ್ಯವಿಲ್ಲ' ಎಂದು ಹೈಕೋರ್ಟ್ ಹೇಳಿದೆ.
'ವಿಮಾನ ನಿಲ್ದಾಣದ ಬಳಿ ಪ್ರಾರ್ಥನಾ ಕೇಂದ್ರವನ್ನು ಹೊಂದುವ ಪ್ರಶ್ನೆಯೇ ಇಲ್ಲ. ಧರ್ಮ ಅಥವಾ ಏನೇ ಇರಲಿ. ಭದ್ರತೆಯೇ ಮೊದಲ ಆದ್ಯತೆಯಾಗಿರಲಿದೆ. ಧರ್ಮಾತೀತವಾಗಿ ಪ್ರತಿಯೊಬ್ಬರು ವಿಮಾನ ನಿಲ್ದಾಣದ ಮೂಲಕವೇ ತೆರಳುತ್ತಾರೆ' ಎಂದು ನ್ಯಾಯಾಲಯವು ಉಲ್ಲೇಖಿಸಿದೆ.
'ಭದ್ರತೆಯ ವಿಚಾರ ಬಂದರೆ, ಯಾವುದೇ ಕಾರಣಕ್ಕೂ ರಾಜಿ ಸಾಧ್ಯವಿಲ್ಲ' ಎಂದು ಒತ್ತಿ ಹೇಳಿದೆ.
'ನಾವು ಜಗತ್ತಿನ ಎಲ್ಲಿಯೂ ಇಂತಹದ್ದನ್ನು ನೋಡಿಲ್ಲ. ವಿಮಾನ ನಿಲ್ದಾಣದ ಬಳಿ ಇಂತಹದ್ದನ್ನು ಕಾಣಲು ಸಾಧ್ಯವಿಲ್ಲ' ಎಂದು ನ್ಯಾಯಾಲಯ ಗಮನಿಸಿದೆ.
'ಅರ್ಜಿದಾರರು ತಾವು ಬಯಸಿದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಪಡೆಯಲು ಸಾಧ್ಯವಿಲ್ಲ. ನಾಳೆ ನೀವು ದಕ್ಷಿಣ ಮುಂಬೈನ ಒವಲ್ ಮೈದಾನದ ಮಧ್ಯಭಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಬಹುದು. ಇದು ಸಾಧ್ಯವೇ ಇಲ್ಲ' ಎಂದು ವಿವರಿಸಿದೆ.

