ಭುವನೇಶ್ವರ: ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಆರೋಪದ ಮೇಲೆ ಬಿಜು ಜನತಾದಳ (BJD) ತನ್ನ ಆರು ಶಾಸಕರನ್ನು ಅಮಾನತುಗೊಳಿಸಿದೆ.
ಈ ಶಾಸಕರು ಪಕ್ಷಾಂತರ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.ಪಕ್ಷವು ಅವರಿಗೆ ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಿದ್ದು, ಮಾರ್ಚ್ 20 ರೊಳಗೆ ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಅಮಾನತುಗೊಂಡ ಬಿಜೆಡಿ ಶಾಸಕರು ಚಕ್ರಮಣಿ ಕನ್ಹಾರ್ (ಬಲಿಗುಡ), ನಬಕಿಶೋರ್ ಮಲ್ಲಿಕ್ (ಜಯದೇವ್), ಸೌವಿಕ್ ಬಿಸ್ವಾಲ್ (ಚೌಧರಿ-ಕಟಕ್), ಸುಬಾಸಿನಿ ಜೆನಾ (ಬಸ್ತಾ), ಡಾ. ರಾಮಕಾಂತ್ ಭೋಯಿ (ತಿರ್ಟೋಲ್), ಮತ್ತು ದೇವಿರಂಜನ್ ತ್ರಿಪಾಠಿ (ಬಂಕಿ). ನಿಮ್ಮ ಕ್ರಮಗಳು ಬಿಜು ಜನತಾದಳ ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತವೆ. ಇದು ಪಕ್ಷದ ಸಾಮೂಹಿಕ ನಿರ್ಧಾರಗಳಿಗೆ ಸಂಪೂರ್ಣ ನಿಷ್ಠೆಯನ್ನು ಕಡ್ಡಾಯಗೊಳಿಸುತ್ತದೆ. ಮೇಲಿನ ನಿರ್ದೇಶನಗಳಿಗೆ ವಿರುದ್ಧವಾಗಿ ನೀವು ಬಿಜು ಜನತಾದಳದಿಂದ ಬೆಂಬಲಿತವಲ್ಲದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದೀರಿ. ಇದನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಪಕ್ಷ ಹೇಳಿದೆ.
ರಾಜ್ಯಸಭೆಯ 37 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಕೂಟವು 30 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ 245 ಸ್ಥಾನಗಳಲ್ಲಿ 141ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. INDIA ಕೂಟವು 6 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಲವನ್ನು 75ಕ್ಕೆ ಏರಿಸಿಕೊಂಡಿದೆ. ಇದರಿಂದ ಇತರೆ 27 ಮಂದಿ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. ಬಿಜೆಪಿಯ ಚುನಾಯಿತ ಸದಸ್ಯರ ಸಂಖ್ಯೆ 98 ರಿಂದ 101ಕ್ಕೆ ಏರಿದ್ದರೆ, 12 ನಾಮನಿರ್ದೇಶಿತ ಸದಸ್ಯರಲ್ಲಿ ಐದು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮೇಲ್ಮನೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆಯನ್ನು 106ಕ್ಕೆ ಏರಿಕೆಯಾಗಿದೆ.
ಇನ್ನು ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್ನ ಸಂಖ್ಯೆ 27 ರಿಂದ 29 ಕ್ಕೆ ಏರಿದೆ. ಟಿಎಂಸಿ 13, ಎಎಪಿ 10, ಡಿಎಂಕೆ 8, ಬಿಜೆಡಿ 6, ಸಮಾಜವಾದಿ ಪಕ್ಷ 4, ನ್ಯಾಷನಲ್ ಕಾನ್ಫರೆನ್ಸ್, ಬಿಆರ್ಎಸ್, ಸಿಪಿಎಂ ಮತ್ತು ಆರ್ಜೆಡಿ ತಲಾ 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

