ಚುರು: ರಾಜಸ್ಥಾನದ ಚುರುವಿನ ಸರಕಾರಿ ಕಾನೂನು ಕಾಲೇಜಿನ 30 ವರ್ಷದ ವಿದ್ಯಾರ್ಥಿನಿಯೋರ್ವಳು ತನ್ನ ಇಬ್ಬರು ಪ್ರಾದ್ಯಾಪಕರ ವಿರುದ್ಧ ಜಾತಿ ತಾರತಮ್ಯ ಎಸಗಿರುವುದಾಗಿ ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿರುವುದಾಗಿ ಆರೋಪಿಸಿದ್ದಾಳೆ ಎಂದು ವರದಿಯಾಗಿದೆ.
ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಹಾಗೂ ಅನಿಲ್ ಸಾರ್ವಜನಿಕ ಸ್ಥಳದಲ್ಲಿ ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಮೀನಾ ಮೇಘವಾಲ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 27ರಂದೂ ದೂರು ದಾಖಲಿಸಿದ್ದಾರೆ.
''ನನ್ನನ್ನು ಅನುತ್ತೀರ್ಣಗೊಳಿಸುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಮೇಘವಾಲ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮೇಘವಾಲ್ ಅವರು ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ನ ವಿದ್ಯಾರ್ಥಿನಿ.
2025 ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇಘವಾಲ್ ಕೇಳಿದ ಪ್ರಶ್ನೆಯಿಂದ ಅಪೂರ್ವ ಶರ್ಮಾ ಅವರು ಕೋಪಗೊಂಡಿದ್ದರು. ಮೇಘವಾಲ್ ಅವರ ಹೇಳಿಕೆಯ ಪ್ರಕಾರ, ಅಪೂರ್ವ ಶರ್ಮಾ ಅವರು ಆಕೆಗೆ ತಿರಸ್ಕಾರದಿಂದ ಉತ್ತರ ನೀಡಿದರು ಹಾಗೂ ದೂರ ತಳ್ಳಿದರು. ಅಪೂರ್ವ ಶರ್ಮಾ ಅವರು 'ಚಮಾರಿ'ಯಂತಹ ಜಾತಿ ನಿಂದನೆಯ ಪದ ಬಳಸಿದರು. ''ನೀನು ಕೆಳ ಜಾತಿಯಿಂದ ಬಂದಿದ್ದೀಯ. ನೀನು ಎಲ್ಎಲ್ಬಿ ಮಾಡಲು ಸಾಧ್ಯವಿಲ್ಲ. ಇದು ನಿನ್ನ ಕೆಲಸವಲ್ಲ'' ಎಂದು ಅವರು ಹೇಳಿದ್ದರು.
''ಎಲ್ಲಾ ವಿದ್ಯಾರ್ಥಿಗಳ ಎದುರು ಚಮಾರಿ ಎಂದು ಕರೆದಿರುವುದರಿಂದ ನನಗೆ ಅವಮಾನವಾಯಿತು'' ಎಂದು ಮೇಘವಾಲ್ ತಿಳಿಸಿದ್ದಾರೆ.
ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಅವರು ತನ್ನ ವಿರುದ್ಧ ಜಾತಿ ದ್ವೇಷ ಹೊಂದಿದ್ದರು. ತನ್ನನ್ನು ನಿರಂತರ ಅವಮಾನಿಸುತ್ತಿದ್ದರು. ತನ್ನನ್ನು ಅನುತ್ತೀರ್ಣ ಕೂಡ ಮಾಡಿದರು ಎಂದು ಅವರು ಹೇಳಿದ್ದಾರೆ. ''ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡುವ ಮೂಲಕ ನಾನು ಅನುತ್ತೀರ್ಣವಾಗುವಂತೆ ಅವರು ಮಾಡಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.
ಮೇಘವಾಲ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

