ನವದೆಹಲಿ: ಮುಂದಿನ ಎರಡು ದಶಕಗಳಲ್ಲಿ ಭಾರತವು ಪ್ರತಿ ವರ್ಷ 15 ರಿಂದ 40 ಅಸಾಮಾನ್ಯ ಶಾಖದ ದಿನಗಳನ್ನು ಕಾಣಬಹುದು ಎಂದು ಹೊಸ ಕೃತಕ ಬುದ್ಧಿಮತ್ತೆ ಚಾಲಿತ ಹವಾಮಾನ ವೇದಿಕೆ ತಿಳಿಸಿದೆ.
1981-2010ರ ಹವಾಮಾನ ಬೇಸ್ಲೈನ್ಗೆ ಹೋಲಿಸಿದರೆ, ವೇಗವರ್ಧಿತ ಹವಾಮಾನ ಬದಲಾವಣೆಯಿಂದಾಗಿ ಈ ಬದಲಾವಣೆ ಕಂಡುಬರಲಿದೆ ಎಂದು ವರದಿ ತಿಳಿಸಿದೆ.
ಕ್ಲೈಮೆಟ್ ರೆಸಿಲಿಯನ್ಸ್ ಅನಾಲಿಟಿಕ್ಸ್ ಅಂಡ್ ವಿಶುವಲೈಸೇಶನ್ ಇಂಟೆಲಿಜೆನ್ಸ್ ಸಿಸ್ಟಂ(ಸಿಆರ್ಎವಿಎಎಸ್) ಈ ಅಂದಾಜು ಮಾಡಿದೆ. ದೆಹಲಿ ಮೂಲದ ಇಂಧನ, ಪರಿಸರ ಮತ್ತು ನೀರಿನ ಮಂಡಳಿ ಸಂಬಂಧಿತ ಹವಾಮಾನ ಚಿಂತಕರ ಚಾವಡಿ(ಸಿಇಇಡಬ್ಲ್ಯು) ಇದನ್ನು ಅಭಿವೃದ್ಧಿಪಡಿಸಿದ್ದು, ಬುಧವಾರ ಉದ್ಘಾಟನೆಗೊಂಡಿದೆ.
ಸಿಆರ್ಎವಿಐಎಸ್ ಪ್ರಕಾರ, ದೇಶದ ಹಲವು ಪ್ರದೇಶಗಳಲ್ಲಿ ವಾರ್ಷಿಕವಾಗಿ 20 ರಿಂದ 40 ಶಾಖದ ರಾತ್ರಿಗಳ ಏರಿಕೆ ಕಂಡುಬರಬಹುದು. ಇದಲ್ಲದೆ, ಮುಂದಿನ ಎರಡು ದಶಕಗಳಲ್ಲಿ ಭಾರೀ ಮಳೆಯ ಘಟನೆಗಳು ಸ್ಥಿರವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. ಹಲವು ಜಿಲ್ಲೆಗಳಲ್ಲಿ ವಾರ್ಷಿಕ 10 ರಿಂದ 30 ಹೆಚ್ಚುವರಿ ಭಾರೀ ಮಳೆಯ ದಿನಗಳನ್ನು ನೋಡಬಹುದು.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಮುಂತಾದ ಮಧ್ಯ ಮತ್ತು ದಕ್ಷಿಣ ಭಾರತದ ರಾಜ್ಯಗಳು ಮಳೆ ಮತ್ತು ಬಿಸಿಲಿನ ದಿನಗಳಲ್ಲಿ ಬಲವಾದ ಹೆಚ್ಚಳವನ್ನು ಕಾಣುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
40 ವರ್ಷಗಳ ಐತಿಹಾಸಿಕ ಹವಾಮಾನ ದತ್ತಾಂಶವನ್ನು ಒಟ್ಟುಗೂಡಿಸಿ ಈ ಅಂದಾಜನ್ನು ಕೃತಕ ಬುದ್ಧಿಮತ್ತೆ ಚಾಲಿತ ಹವಾಮಾನ ಸಾಧನವು ಮಾಡಿದೆ. ಇದು 2030-50 ಮತ್ತು 2051-70 ರವರೆಗಿನ ಮುನ್ಸೂಚನೆಗಳನ್ನು ಒದಗಿಸುತ್ತದೆ.
ಈ ವೇದಿಕೆಯು ಜಿಲ್ಲೆ, ಗ್ರಿಡ್ ಮತ್ತು ರಾಜ್ಯ ಮಟ್ಟದಲ್ಲಿ 279 ಸೂಚಕಗಳ ಮೂಲಕ ಹವಾಮಾನ ದತ್ತಾಂಶವನ್ನು ಒದಗಿಸುತ್ತದೆ. ಇದನ್ನು ತಾಪಮಾನ, ಮಳೆ ಮತ್ತು ತೇವಾಂಶವನ್ನು ಒಳಗೊಂಡ 20ಕ್ಕೂ ಹೆಚ್ಚು ವಿಶ್ಲೇಷಣಾತ್ಮಕ ಸ್ನೇಹಿ ಮೆಟ್ರಿಕ್ಗಳಾಗಿ ವಿಂಗಡಿಸಲಾಗುತ್ತದೆ.
'ಈ ಹವಾಮಾನ ಬುದ್ಧಿಮತ್ತೆಯ ಮಾದರಿಗಳ ದತ್ತಾಂಶವನ್ನು ಆಡಳಿತದ ಎಲ್ಲ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುವವರ ಕೈಗೆ ವರ್ಗಾಯಿಸಲು ವಿನ್ಯಾಸಗೊಳಿಸಲಾಗಿದೆ. ಇದು ಜಿಲ್ಲೆಗಳಿಂದ ರಾಷ್ಟ್ರೀಯ ಮಟ್ಟಕ್ಕೆ, ಅಂತಿಮವಾಗಿ ಜಾಗತಿಕ ಮಟ್ಟದವರೆಗೆ ದೈನಂದಿನ ಯೋಜನೆ ಮತ್ತು ಪ್ರತಿಕ್ರಿಯೆ ವ್ಯವಸ್ಥೆಗಳಲ್ಲಿ ಬಳಸಬಹುದಾದ ವಿಶ್ವಾಸಾರ್ಹ ಮಾಪಕಗಳಲ್ಲಿ ಅನುಕೂಲಕರವಾಗಿದೆ' ಎಂದು ಸಿಇಇಡಬ್ಲ್ಯುನ ಸಿಇಒ ಅರುಣಾಭ ಘೋಷ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

