ಕೋಲ್ಕತ್ತ: ಬಿಜೆಪಿ ಅಭ್ಯರ್ಥಿ ಹಾಗೂ ಆರ್.ಜಿ.ಕರ್ ಕಾಲೇಜಿನ ಅತ್ಯಾಚಾರ-ಕೊಲೆ ಸಂತ್ರಸ್ತೆಯ ತಾಯಿ ರತ್ನ ದೆಬನಾಥ್ ಅವರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಬುಧವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಮತಗಟ್ಟೆಗೆ ಭೇಟಿ ನೀಡಿದ್ದ ರತ್ನ ದೆಬನಾಥ್ ಅವರು ಹೊರಬರುವಾಗ ಗದ್ದಲ ಸೃಷ್ಟಿಯಾಗಿತ್ತು.
'ನಾನು ಮತಗಟ್ಟೆಯಿಂದ ಹೊರಬರುವಾಗ ಒಬ್ಬ ವೃದ್ಧೆ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡೆ. ಅವರಿಗೆ ಮತ ಚಲಾಯಿಸಲು ಸಹಾಯ ಮಾಡುವಂತೆ ಅಲ್ಲಿನವರಿಗೆ ವಿನಂತಿಸಿದೆ. ಆದರೆ, ಅದನ್ನು ಕಂಡ ಟಿಎಂಸಿ ಕಾರ್ಯಕರ್ತರು ನಾನು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಲ್ಲಿಂದ ಹೊರಹೋಗದಂತೆ ಒತ್ತಾಯಿಸಿದರು' ಎಂದು ರತ್ನ ದೆಬನಾಥ್ ಹೇಳಿದ್ದಾರೆ.
ನಂತರ ಕೇಂದ್ರ ಭದ್ರತಾ ಪಡೆಯ ಯೋಧರು ಮಧ್ಯಪ್ರವೇಶಿಸಿ ರತ್ನ ಅವರು ಸ್ಥಳದಿಂದ ನಿರ್ಗಮಿಸಲು ನೆರವಾದರು.
ಮತ ಚಲಾಯಿಸಿ ಮಾತನಾಡಿದ ರತ್ನ ದೆಬನಾಥ್, 'ಮಹಿಳೆಯರ ಸುರಕ್ಷತೆ ನನ್ನ ಮೊದಲ ಆದ್ಯತೆ. ಟಿಎಂಸಿ ಆಡಳಿತದಲ್ಲಿ ನೂರಾರು ಮಹಿಳೆಯರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಜನರು ಈ ಬಾರಿ ಬದಲಾವಣೆಗಾಗಿ ಮತ ಚಲಾಯಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಣಿಹಟಿ ಕ್ಷೇತ್ರದಲ್ಲಿ ರತ್ನ ದೆಬನಾಥ್ ಅವರು ಟಿಎಂಸಿಯ ತೀರ್ಥಂಕರ್ ಘೋಷ್ ಮತ್ತು ಸಿಪಿಐ(ಎಂ)ನ ಕಲಾತನ್ ದಾಸ್ಗುಪ್ತಾ ವಿರುದ್ಧ ಸ್ಪರ್ಧಿಸಿದ್ದಾರೆ.
ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಇಂದು (ಬುಧವಾರ) ನಡೆಯುತ್ತಿದ್ದು, ಭಾರಿ ಭದ್ರತೆ ಒದಗಿಸಲಾಗಿದೆ. ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 93.19ರಷ್ಟು ದಾಖಲೆ ಪ್ರಮಾಣದ ಮತದಾನವಾಗಿತ್ತು. ಚುನಾವಣಾ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.

