ಹಜಾರಿಬಾಗ್: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಬಿಜೆಪಿಯ ಕಾರ್ತಕರ್ತರಂತೆ ಕಲಸ ಮಾಡುತ್ತಿದೆ ಎಂದು ಅಟಲ್ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಯಶವಂತ ಸಿನ್ಹಾ ಟೀಕಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ಗೆ ಚುನಾವಣಾ ಆಯೊಗವು ಅಂತಿಮ ಎಚ್ಚರಿಕೆ ನೀಡಿದ ಸುದ್ದಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, 'ನಿಷ್ಪಕ್ಷಪಾತ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸುತ್ತದೆ ಎಂದು ನಂಬುವುದು ಸಹಜ. ಆದರೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದಾರೆ' ಎಂದು ಆರೋಪಿಸಿದ್ದಾರೆ.
'ತೃಣಮೂಲ ಕಾಂಗ್ರೆಸ್ನೊಂದಿಗೆ ಚುನಾವಣಾ ಆಯೋಗದ ನೇರ ಸವಾಲು. ಈ ಬಾರಿ ಭಯ-ಮುಕ್ತ, ಹಿಂಸಾಚಾರ-ಮುಕ್ತ, ಬೆದರಿಕೆ-ಮುಕ್ತ, ಪ್ರಭಾವ-ಮುಕ್ತ, ನಕಲಿ ಮತದಾನವಿಲ್ಲದ, ಬೂತ್ ಜಾಮಿಂಗ್ ಮತ್ತು ಸೋರ್ಸ್ ಜಾಮಿಂಗ್ ನಡೆಯದ ಚುನಾವಣೆ ಆಗಲಿದೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಕೇಂದ್ರ ಚುನಾವಣಾ ಆಯೋಗವು ಹಂಚಿಕೊಂಡಿತ್ತು.
ಇದಕ್ಕೆ ಯಶವಂತ ಸಿನ್ಹಾ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಚುನಾವಣಾ ಆಯೋಗದ ಟ್ವೀಟ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ತೃಣಮೂಲ ಕಾಂಗ್ರೆಸ್, 'ತಟಸ್ಥ ಸಾಂವಿದಾನಿಕ ಸಂಸ್ಥೆಯೊಂದು ವರ್ತಿಸುವ ರೀತಿಯೇ?' ಎಂದು ಕೇಳಿತ್ತು.
ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಗೂ ಪೂರ್ವದಿಂದಲೇ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಮತ್ತು ಕೇಂದ್ರ ಚುನಾವಣಾ ಆಯೋಗದ ನಡುವೆ ಗುದ್ದಾಟ ನಡೆದಿದೆ. ಮತದಾರರ ಪಟ್ಟಿಯಿಂದ ಹಲವರ ಹೆಸರುಗಳನ್ನು ಭಾರತೀಯ ಜನತಾ ಪಾರ್ಟಿ ಸೂಚನೆ ಮೇರೆಗೆ ಆಯೋಗವು ಅಳಿಸಿಹಾಕಿದೆ ಎಂದು ಟಿಎಂಸಿ ಆರೋಪಿಸಿತ್ತು.
294 ಕ್ಷೇತ್ರಗಳ ಪಶ್ಚಿಮ ಬಂಗಾಳ ವಿಧಾನಸಭೆಗೆ ಏ. 23 ಹಾಗೂ ಏ. 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಚುನಾವಣೆ ಘೋಷಣೆಯಾಗಲಿದೆ.

