ರಾಯಪುರ: ''ನಮ್ಮನ್ನು ತಮಿಳುನಾಡಿನ ಜವಳಿ ಗಿರಣಿಯೊಂದರಲ್ಲಿ ಬಂಧಿಸಿ ಇರಿಸಲಾಗಿತ್ತು'' ಎಂದು ಅಲ್ಲಿಂದ ಪರಾರಿಯಾಗಿ ಮನೆಗೆ ಮರಳಿರುವ ಜಾರ್ಖಂಡ್ ನ ಸುಮಾರು 60 ಕಾರ್ಮಿಕರು ಆರೋಪಿಸಿದ್ದಾರೆ.
''ನಮಕ್ಕಲ್ ನಲ್ಲಿರುವ ಜವಳಿ ಘಟಕದಲ್ಲಿ ನಮ್ಮನ್ನು ಬಂಧಿಸಿ ಇರಿಸಲಾಗಿತ್ತು.
ನಾವು ಹೊರಡಲು ನಿರ್ಧರಿಸಿದಾಗ ವೇತನ ನೀಡಲಿಲ್ಲ. ಕಾರ್ಖಾನೆಯ ಗೇಟಿಗೆ ಬೀಗ ಹಾಕಲಾಯಿತು. ಕೆಲಸ ಮುಂದುವರಿಸುವಂತೆ ಬೆದರಿಕೆ ಒಡ್ಡಲಾಯಿತು. ನಮ್ಮ ಪ್ರತಿಭಟನೆಯನ್ನು ಹಿಂಸೆಯ ಮೂಲಕ ಹತ್ತಿಕ್ಕಲಾಯಿತು. ಇಂತಹ ಸಂಕಷ್ಟದ ಸಂದರ್ಭದಲ್ಲೂ ಜಾರ್ಖಂಡ್ ನ ಅಧಿಕಾರಿಗಳಿಂದ ನಮಗೆ ಯಾವುದೇ ನೆರವು ದೊರಕಿಲ್ಲ'' ಎಂದು ಕಾರ್ಮಿಕರೊಬ್ಬರು ಆರೋಪಿಸಿದ್ದಾರೆ.
''ಆದರೆ, ನಾವು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾದೆವು. ನಮ್ಮಲ್ಲಿದ್ದ ಸ್ವಲ್ಪ ಹಣವನ್ನು ಟಿಟಿಇಗೆ ನೀಡಿ ಎರ್ನಾಕುಲಂ-ಟಾಟಾ ಎಕ್ಸ್ಪ್ರೆಸ್ ರೈಲು ಹತ್ತಿದೆವು. ಅನಂತರ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ಪಾವತಿಸಿದೆವು. ನಮ್ಮಲ್ಲಿ ಹಣವೇ ಇರಲಿಲ್ಲ. ಇದರಿಂದ ಆಹಾರವನ್ನು ಕೂಡ ಖರೀದಿಸಲು ಸಾಧ್ಯವಾಗದೆ ಹಸಿವಿನಿಂದ ಬಳಲಿದೆವು'' ಎಂದು ಕಾರ್ಮಿಕರು ತಮ್ಮ ಪ್ರಯಾಣದ ಸಂಕಷ್ಟ ಹಾಗೂ ಯಾತನೆಯನ್ನು ವಿವರಿಸಿದ್ದಾರೆ.
ಉತ್ತಮ ವೇತನ, ಆಹಾರ ಹಾಗೂ ವಸತಿ ನಿಡುವುದಾಗಿ ಭರವಸೆ ನೀಡಿ ಒಡಿಶಾದ ಏಜೆಂಟ್ ಓರ್ವ ತಮ್ಮನ್ನು ತಮಿಳುನಾಡಿಗೆ ಕರೆದುಕೊಂಡು ಹೋದ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಈ ವಿಷಯದ ಕುರಿತು ತನಿಖೆ ನಡೆಸುವಂತೆ ಚಾಯ್ಬಾಸಾ ಉಪ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

