ಟೆಹರಾನ್: ಅಮೆರಿಕದೊಂದಿಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ತನ್ನ ಎಲ್ಲ ಮಿಲಿಟರಿ ಘಟಕಗಳಿಗೆ ದಾಳಿ ನಿಲ್ಲಿಸುವಂತೆ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸೂಚನೆ ನೀಡಿದ್ದಾರೆ. ಆದರೆ, ಅದೇ ಸಮಯದಲ್ಲಿ, ಇದು ಯುದ್ಧದ ಅಂತ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್(ಐಆರ್ಐಬಿ) ಪ್ರಕಟಿಸಿರುವ ಹೇಳಿಕೆಯಲ್ಲಿ, ಇದು ಯುದ್ಧದ ಅಂತ್ಯವಲ್ಲ ಆದರೆ, ಎಲ್ಲ ಮಿಲಿಟರಿ ಶಾಖೆಗಳು ಸರ್ವೋಚ್ಚ ನಾಯಕರ ಆದೇಶವನ್ನು ಪಾಲಿಸಬೇಕು. ತಮ್ಮ ದಾಳಿಯನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಕದನ ವಿರಾಮವು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ. ಶತ್ರು ದೇಶಗಳ ವರ್ತನೆ ಮೇಲೆ ನಮ್ಮ ನಿರ್ಧಾರ ಇರುತ್ತದೆ. ನಮ್ಮ ಬೆರಳು ಯಾವಾಗಲೂ ಟ್ರಿಗರ್ ಮೇಲೆ ಇರುತ್ತದೆ ಎಂದು ಅದು ತಿಳಿಸಿದೆ.
ಇರಾನ್ನಿಂದ 10 ಅಂಶಗಳ ಪ್ರಸ್ತಾಪ
ಫೆಬ್ರುವರಿ 28ರಂದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿ, ಯುದ್ಧದ ಮೊದಲ ದಿನದಂದೇ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರನ್ನು ಕೊಂದಿದ್ದವು. ಕಳೆದ 39 ದಿನಗಳಲ್ಲಿ, ದೇಶದಾದ್ಯಂತ ಸಾವಿರಾರು ಜನರು ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಹೊರ್ಮುಜ್ ಜಲಸಂಧಿಗೆ ನಿರ್ಬಂಧ ಹೇರುವ ಮೂಲಕ ಇರಾನ್, ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ, ಪರಸ್ಪರ ಪ್ರಸ್ತಾವಗಳ ಮೂಲಕ ಎರಡು ವಾರಗಳ ಯುದ್ಧ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
'ಮಹಾನ್ ರಾಷ್ಟ್ರವಾದ ಇರಾನ್ಗೆ ಯುದ್ಧದ ಬಹುತೇಕ ಎಲ್ಲ ಉದ್ದೇಶಗಳನ್ನು ಸಾಧಿಸಲಾಗಿದೆ ಎಂಬ ಒಳ್ಳೆಯ ಸುದ್ದಿಯನ್ನು ನೀಡುತ್ತಿದ್ದೇವೆ. ನಿಮ್ಮ ಧೈರ್ಯಶಾಲಿ ಮಕ್ಕಳು ಶತ್ರುವನ್ನು ಐತಿಹಾಸಿಕ ಅಸಹಾಯಕತೆ ಮತ್ತು ಶಾಶ್ವತ ಸೋಲಿಗೆ ನೂಕಿದ್ದಾರೆ'ಎಂ ದು ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.
ಏಪ್ರಿಲ್ 10 ರಂದು ಶುಕ್ರವಾರ ಇಸ್ಲಾಮಾಬಾದ್ನಲ್ಲಿ ಮಾತುಕತೆ ನಡೆಯಲಿದೆ ಎಂದೂ ಅದು ದೃಢಪಡಿಸಿದೆ.
ಕದನ ವಿರಾಮ ಕೋರಿ ಇರಾನ್ಗೆ ಅಮೆರಿಕ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು. ಮಾತುಕತೆಗೆ ಆಧಾರವಾಗಿ ಇರಾನ್ ಕಳುಹಿಸಿದ ಪರಿಷ್ಕೃತ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿತ್ತು.

