ಹೈದರಾಬಾದ್: ಉದ್ಯೋಗಕ್ಕಾಗಿ ನೇಪಾಳಕ್ಕೆ ತೆರಳಿದ್ದ ಹೈದರಾಬಾದ್ನ ಆರು ಯುವಕರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು, ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಬೇಕು ಎಂದು ಮಜ್ಲಿಸ್ ಬಚಾವೋ ತೆಹ್ರಿಕ್ (ಎಂಬಿಟಿ) ವಕ್ತಾರ ಅಮ್ಜದ್ ಉಲ್ಲಾ ಖಾನ್ ಒತ್ತಾಯಿಸಿದ್ದಾರೆ.
ಹೈದರಾಬಾದ್ ಮೂಲದ ಸೈಯದ್ ಮಜಿದ್, ಸಾಜಿದ್ ಓಮರ್ ಸೈಯದ್, ಮೊಹಮ್ಮದ್ ಇಮ್ರಾನ್, ಮೀರ್ ಖಾಲಿದ್ ಹುಸೇನ್, ರಜಾಕ್ ಮೊಹಮ್ಮದ್ ಮತ್ತು ರಾಮದಗಿರಿ ಎಂಬ ಯುವಕರು ಕೆಲಸಕ್ಕಾಗಿ ಕಠ್ಮಂಡುವಿಗೆ ತೆರಳಿದ್ದರು. ಹೈದರಾಬಾದ್ನ ವ್ಯಕ್ತಿಯೊಬ್ಬರ ಮೂಲಕ ಇವರು ನೇಪಾಳದ ʼಶೀರ್ಟೆಲ್ ಹಾಲಿಡೇಸ್ʼ ಎಂಬ ಕಂಪನಿಯಲ್ಲಿ ಸೇಲ್ಸ್ಮನ್ ಮತ್ತು ಕಸ್ಟಮರ್ ಕೇರ್ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು.
ಕಳೆದ ಮೂರು ತಿಂಗಳಿಂದ ಯುವಕರು ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಸಂಬಳವನ್ನೂ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಅನಿಲ್ ಅಂಬಾನಿಗೆ ತಾನು ಶ್ವೇತಭವನದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎಪ್ಸ್ಟೈನ್ಕೇರಳದಲ್ಲಿ ದೇವರು ಕೂಡ ಸುರಕ್ಷಿತವಾಗಿಲ್ಲ: ನಿರ್ಮಲಾ ಸೀತಾರಾಮನ್
ಮಾರ್ಚ್ 17ರಂದು ಕಠ್ಮಂಡುವಿನ ಲಲಿತ್ಪುರ ಜಿಲ್ಲೆಯ ಮಹಾಲಕ್ಷ್ಮಿ ಮುನ್ಸಿಪಾಲಿಟಿಯಲ್ಲಿರುವ ಕಂಪನಿಯ ಕಚೇರಿಯ ಮೇಲೆ ನೇಪಾಳ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಂಪನಿಯ ಮಾಲೀಕ ಬಿಬೆಕ್ ರೆಗ್ಮಿ ಸೇರಿದಂತೆ ಸುಮಾರು 40 ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ನೇಪಾಳದ ಪ್ರಜೆಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ, ಭಾರತದ ಯುವಕರು ಮಾತ್ರ ಇನ್ನೂ ಬಂಧನದಲ್ಲೇ ಮುಂದುವರಿದಿದ್ದಾರೆ ಎಂದು ಎಂಬಿಟಿ ತಿಳಿಸಿದೆ.
ಇವರು ಕೇವಲ ಉದ್ಯೋಗಿಗಳಾಗಿದ್ದು, ಕಂಪನಿಯ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಇವರ ನೇರ ಪಾಲುದಾರಿಕೆ ಇಲ್ಲ ಎಂದು ಎಂಬಿಟಿ ಹೇಳಿದೆ.
ಯುವಕರ ಕುಟುಂಬದವರು ತೀವ್ರ ಆತಂಕದಲ್ಲಿದ್ದು, ತಮ್ಮ ಮಕ್ಕಳ ಸುರಕ್ಷಿತ ವಾಪಸಾತಿಗಾಗಿ ಸಹಾಯ ಕೋರಿದ್ದಾರೆ. ಹೀಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅಮ್ಜದ್ ಉಲ್ಲಾ ಖಾನ್ ಮನವಿ ಮಾಡಿದ್ದಾರೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸೂಚನೆ ನೀಡಿ, ಬಂಧಿತ ಯುವಕರಿಗೆ ಕಾನೂನು ನೆರವು ಒದಗಿಸಬೇಕು ಮತ್ತು ಅವರ ಶೀಘ್ರ ಬಿಡುಗಡೆ ಹಾಗೂ ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

