ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಮಂಡಿಸುವ ಕುರಿತು ವಿರೋಧ ಪಕ್ಷಗಳು ಎರಡೂ ಸದನಗಳಲ್ಲಿ ನೀಡಿದ್ದ ನೋಟಿಸ್ ಅನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ ಸಿ.ಪಿ.ರಾಧಾ ಕೃಷ್ಣನ್ ಸೋಮವಾರ ತಿರಸ್ಕರಿಸಿದ್ದಾರೆ.
ವಿರೋಧ ಪಕ್ಷಗಳು ನೋಟಿಸ್ ನೀಡಿದ 25 ದಿನಗಳ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೋಟಿಸ್ ತಿರಸ್ಕರಿಸಿದ ಬಗ್ಗೆ ಸ್ಪೀಕರ್, ಸಭಾಪತಿ ಅವರು ಪ್ರತ್ಯೇಕ ಆದೇಶ ನೀಡಿದ್ದಾರೆ. '1968ರ ನ್ಯಾಯಾಧೀಶರು (ವಿಚಾರಣೆ) ಕಾಯ್ದೆಯ ಸೆಕ್ಷನ್ 3 ನೀಡಿದ ಅಧಿಕಾರವನ್ನು ಬಳಸಿ, ನೋಟಿಸ್ ಅನ್ನು ತಿರಸ್ಕರಿಸಲಾಗಿದೆ' ಎಂದು ಸ್ಪೀಕರ್, ಸಭಾಪತಿ ನೀಡಿದ ಆದೇಶದಲ್ಲಿ ಹೇಳಲಾಗಿದೆ.

