ನವದೆಹಲಿ: 'ದೇವರ ವಿಗ್ರಹವನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ' ಎಂದು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕನನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
'ಭಕ್ತನೊಬ್ಬ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ದೇವರ ಗುಣಲಕ್ಷಣಕ್ಕೆ ವಿರುದ್ಧವಾಗಿರಲು ಸಾಧ್ಯವಿಲ್ಲ.
ದೇವರ ದೈವಿಕ ಚೈತನ್ಯಕ್ಕೆ ಭಕ್ತನು ಶರಣಾಗುತ್ತಾನೆ' ಎಂಬ ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರ ಹೇಳಿಕೆಗೆ, ಸುಪ್ರೀಂ ಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ.
ಶಬರಿಮಲೆ ಸೇರಿದಂತೆ ದೇಶದ ವಿವಿಧೆಡೆ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನಡೆಸುತ್ತಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಬಿ.ವಿ ನಾಗರತ್ನ, ಎಂ.ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್.ಮಹಾದೇವನ್ ಅವರು ಈ ಪೀಠದಲ್ಲಿದ್ದಾರೆ.
ಶಬರಿಮಲೆ ದೇವಸ್ಥಾನದ ತಂತ್ರಿ ಪರವಾಗಿ ಹಾಜರಾದ ಹಿರಿಯ ವಕೀಲ ವಿ. ಗಿರಿ ಅವರು, 'ಯಾವುದೇ ದೇವಸ್ಥಾನದಲ್ಲಿ ಪಾಲಿಸಿಕೊಂಡು ಬರುತ್ತಿರುವ ಆಚರಣೆಗಳ ಸ್ವರೂಪವು ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಧಾರ್ಮಿಕ ಆಚರಣೆಯೇ ಆಗಿದೆ' ಎಂದು ಪೀಠಕ್ಕೆ ಮನವಿ ಮಾಡಿದರು. 'ಹಾಗಾಗಿ, ಇಂತಹ ಆಚರಣೆಗಳ ಮುಂದುವರಿಕೆ ಅತ್ಯಗತ್ಯ. ಇದು ಧರ್ಮದಲ್ಲಿ ನಂಬಿಕೆ ಹೊಂದಿರುವ ಯಾವುದೇ ಭಕ್ತನ ಪೂಜೆಯ ಹಕ್ಕಿನ ಭಾಗವೂ ಆಗಿದೆ' ಎಂದರು.
ಇದರ ವಿರುದ್ಧ ಪ್ರಶ್ನೆ ಎತ್ತಿದ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, 'ನಾನು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿ ದೇವರಿದ್ದಾನೆ, ದೇವರು ನನ್ನ ಸೃಷ್ಟಿಕರ್ತ ಎನ್ನುವುದು ನನ್ನ ಮೂಲ ನಂಬಿಕೆ ಆಗಿರುತ್ತದೆ. ದೇವರ ಮುಂದೆ ಹೋಗಿ ನಿಲ್ಲುವಾಗ ನನ್ನ ಹೃದಯದಲ್ಲಿ ಅಶುದ್ಧವಾದದ್ದು ಏನೂ ಇರುವುದಿಲ್ಲ, ಆದರೆ, ಹುಟ್ಟಿನಿಂದ, ನಿರ್ದಿಷ್ಟ ಸನ್ನಿವೇಶದಿಂದ ಅಥವಾ ವಂಶಪರಂಪರೆಯಿಂದ ದೇವರನ್ನು ಮುಟ್ಟಲು ಅವಕಾಶ ನಿರಾಕರಿಸಿದರೆ, ಆಗ ಅಂತಹ ಭಕ್ತನ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ' ಎಂದು ಪ್ರಶ್ನಿಸಿದರು. 'ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ವ್ಯತ್ಯಾಸ ಇರಲು ಸಾಧ್ಯವಿಲ್ಲ' ಎಂದರು.
ಶಬರಿಮಲೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು 'ನೈಷ್ಠಿಕ ಬ್ರಹ್ಮಚರ್ಯ' (ಶಾಶ್ವತ ಬ್ರಹ್ಮಚರ್ಯ) ಅತ್ಯಗತ್ಯ ಎಂದು ವಕೀಲ ವಿ. ಗಿರಿ ಅವರು ಪೀಠಕ್ಕೆ ಹೇಳಿದರು. ಪ್ರಕರಣದ ವಿಚಾರಣೆ ಮುಂದುವರಿದಿದೆ.
ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ಏರಿ, ದೇವಸ್ಥಾನ ಪ್ರವೇಶಿಸಲು ಹಕ್ಕಿದೆ ಎಂದು 2018ರಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಬಹುಮತದ ತೀರ್ಪು ನೀಡಿತ್ತು. ಮಹಿಳಾ ಸಮಾನತೆಯ ದೃಷ್ಟಿಯಿಂದ ಮಹತ್ವದ ತೀರ್ಪು ಇದು.

