ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ದ್ವಿತೀಯ ದಿನ ಶನಿವಾರ ಬೆಳಗ್ಗೆ ಯಜ್ಞಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲಂ ಪಯ್ಯನ್ನೂರು ಅವರು ಪ್ರವಚನ ನಡೆಸಿಕೊಟ್ಟರು. ಮನಸ್ಸು ವ್ಯಾಕುಲತೆಯಲ್ಲಿರುವಾಗ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಿಳಿಸಿದ ಅವರು ಇಂತಹ ಸಂದರ್ಭಗಳಲ್ಲಿ ಮನಸ್ಸಿಗೆ ಸಮಾಧಾನವನ್ನು ತಂದುಕೊಳ್ಳುವತ್ತ ಚಿಂತಿಸಬೇಕು. ಶಿವನೆಂದರೆ ಮಂಗಳ ಸ್ವರೂಪಿ. ಧ್ಯಾನದ ಮೂಲಕ ಭಗವಂತನನ್ನು ಒಲಿಸಿಕೊಂಡು ಶಾಂತಿ ಸಮಾಧಾನವನ್ನು ತಂದುಕೊಳ್ಳಬೇಕು. ತಂದೆ ಎಂಬ ಭಾವಕ್ಕೆ ಶ್ರೇಷ್ಠತೆಯಿದೆ ಎಂದರು.
ಕಪಿಲಾವತಾರ, ನರನಾರಾಯಣ ಅವತಾರ, ದಕ್ಷಯಾಗ, ಧ್ರುವಚರಿತೆ, ಪುರಂಜನೋಪಖ್ಯಾನ, ಋಷಭಾವತಾರ, ಭಾರತ ಕಥೆ, ಭದ್ರಕಾಳಿ ಆವಿರ್ಭಾವ ಕಥಾಭಾಗವನ್ನು ಆಯ್ದುಕೊಂಡು ಪಾರಾಯಣ ಪ್ರವಚನ ನಡೆಯಿತು. ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಗೋಸಾಡ ಮಹಿಷರ್ಮನಿ ಮಾತೃಸಮಿತಿಯ ಅಧ್ಯಕ್ಷೆ ಲಲಿತಾ ಗೋಸಾಡ ಅವರಿಂದ ದೀಪಪ್ರಜ್ವಲನೆಯೊಂದಿಗೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ತೃತೀಯ ದಿನ ಇಂದು ಭಾನುವಾರ ಭರತ ಚರಿತ್ರೆ, ಭೂಗೋಳ ವರ್ಣನೆ, ಅಜಾಮಿಳ ಮೋಕ್ಷ, ವೃತ್ರಾಸುರ ಚರಿತೆ, ಚಿತ್ರಕೇತು ಉಪಖ್ಯಾನ, ಪ್ರಹ್ಲಾದ ಚರಿತೆ, ನರಸಿಂಹಾವತಾರ ಕಥಾಭಾಗದಲ್ಲಿ ಪಾರಾಯಣ ಪ್ರವಚನ ನಡೆಯಲಿರುವುದು. ಗುರುವಾರ ಪ್ರಾರಂಭಗೊಂಡ ಕಾರ್ಯಕ್ರಮ ಮೇ.16 ರಂದು ಸಂಪನ್ನವಾಗಲಿದೆ.

.jpg)
.jpg)
