ಢಾಕಾ : 'ಉತ್ತಮ ಜೀವನ ಅರಸಿ ಅಂಡಮಾನ್ ಸಮುದ್ರದ ಮೂಲಕ ಅಕ್ರಮವಾಗಿ ಮಲೇಷ್ಯಾಕ್ಕೆ ತೆರಳುತ್ತಿದ್ದ ರೋಹಿಂಗ್ಯಾ ಸಮುದಾಯದವರು ಮತ್ತು ಬಾಂಗ್ಲಾದೇಶದ ಮಹಿಳೆಯರು, ಮಕ್ಕಳು ಸೇರಿ ಸುಮಾರು 250 ಮಂದಿ ಇದ್ದ ದೋಣಿ ಮಗುಚಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ' ಎಂದು ವಿಶ್ವಸಂಸ್ಥೆ ಬುಧವಾರ ಮಾಹಿತಿ ನೀಡಿದೆ.
'ವೇಗವಾಗಿ ಬೀಸುತ್ತಿದ್ದ ಗಾಳಿ, ಎತ್ತರದ ಅಲೆಗಳು ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನವರನ್ನು ತುಂಬಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ' ಎಂದು ವಿಶ್ವಸಂಸ್ಥೆ ಹೇಳಿದೆ. ಬಾಂಗ್ಲಾದೇಶದಿಂದ ಇಂಡೊನೇಷ್ಯಾಕ್ಕೆ ತೆರಳುತ್ತಿದ್ದ ಬಾಂಗ್ಲಾದ ಎಂ.ಟಿ. ಮೇಘನಾ ಪ್ರೈಡ್ ಎಂಬ ಹಡಗು ಸಮುದ್ರದಲ್ಲಿ ತೇಲುತ್ತಿದ್ದ ಜನರನ್ನು ಗಮನಿಸಿ 9 ಮಂದಿಯನ್ನು ರಕ್ಷಿಸಿದೆ. ದುರಂತ ನಡೆದ ದಿನದ ಕುರಿತು ಸ್ಪಷ್ಟ ಮಾಹಿತಿ ಇಲ್ಲ.
ಬಾಂಗ್ಲಾದ ಟೇಕ್ನಾಫ್ ಬಂದರಿನಿಂದ ಏಪ್ರಿಲ್ 4ರಂದು ದೋಣಿ ಹೊರಟಿತ್ತು. ಇಲ್ಲಿನ ಕಾಕ್ಸಾ ಬಜಾರ್ನ ನಿರಾಶ್ರಿತರ ಶಿಬಿರದಲ್ಲಿದ್ದ ರೋಹಿಂಗ್ಯಾ ಜನರು ಮತ್ತು ಹಲವು ಬಾಂಗ್ಲಾ ನಾಗರಿಕರು ದೋಣಿಯಲ್ಲಿದ್ದರು. 'ದೋಣಿಯಲ್ಲಿ ಸುಮಾರು 300 ಮಂದಿ ಇದ್ದೆವು. ದುರಂತ ನಡೆದು 10 ದಿನ ಕಳೆದಿರಬಹುದು' ಎಂದು ದುರಂತದಲ್ಲಿ ಬದುಕುಳಿದ ರಫೀಕುಲ್ ಇಸ್ಲಾಂ ತಿಳಿಸಿದರು. ಬಾಂಗ್ಲಾದ ಹಡಗು ಇವರನ್ನು ಏ.9ರಂದು ರಕ್ಷಿಸಿತ್ತು.
'ಉದ್ಯೋಗದ ಭರವಸೆ ನೀಡಲಾಗಿತ್ತು' ರಫೀಕುಲ್ ಇಸ್ಲಾಂ ದುರಂತದಲ್ಲಿ ಬದುಕುಳಿದವಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬ ನನಗೆ ಭರವಸೆ ನೀಡಿದ್ದ. ಉದ್ಯೋಗ ಉತ್ತಮ ಜೀವನದ ಭರವಸೆ ನೀಡಿ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದವರೂ ದೋಣಿಯಲ್ಲಿ ಇದ್ದರು. ಗಸ್ತು ತಿರುಗುವ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮೀನು ಮತ್ತು ಬಲೆ ಇಡುವ ಇಕ್ಕಟ್ಟಿನ ಪೆಟ್ಟಿಗೆ ಒಳಗೆ ನಮ್ಮನ್ನು ತುಂಬಿದರು. ಉಸಿರುಕಟ್ಟಿ ಪೆಟ್ಟಿಗೆಯಲ್ಲಿಯೇ ಸುಮಾರು 30 ಜನರು ಸತ್ತು ಹೋದರು. ದೋಣಿ ಮಗುಚಿದ ಮೇಲೆ ಅದರ ತೈಲ ಹೊರಚೆಲ್ಲಿ ಬೆಂಕಿ ಹೊತ್ತಿಕೊಂಡಿತು. ಇದರಿಂದ ನನಗೂ ಸುಟ್ಟ ಗಾಯಗಳಾದವು. ನಮ್ಮನ್ನು ರಕ್ಷಿಸುವವರೆಗೆ ನಾನು ಸುಮಾರು 36 ಗಂಟೆ ದೋಣಿಯಲ್ಲಿದ್ದ ಮರದ ದಿಮ್ಮಿಯ ಸಹಾಯದಿಂದ ಸಮುದ್ರದಲ್ಲಿಯೇ ತೇಲುತ್ತಿದ್ದೆ
'ಬಡತನ: ರೋಹಿಂಗ್ಯಾಗಳ ಯಾತನೆ'
ಟ 'ಬಾಂಗ್ಲಾದ ನಿರಾಶ್ರಿತರ ಶಿಬಿರದಲ್ಲಿ ಸುಮಾರು 10 ಲಕ್ಷ ರೋಹಿಂಗ್ಯಾ ಸಮುದಾಯದವರು ಇದ್ದಾರೆ. ಆಹಾರ, ಶಿಕ್ಷಣ, ಉದ್ಯೋಗ ಇಲ್ಲ. ಅದಕ್ಕಾಗಿಯೇ ಮಲೇಷ್ಯಾ, ಥಾಯ್ಲೆಂಡ್ ಮತ್ತು ಇಂಡೊನೇಷ್ಯಾಕ್ಕೆ ಅಪಾಯಕಾರಿ ಸಮುದ್ರ ಮಾರ್ಗದ ಮೂಲಕ ತೆರಳುತ್ತಿದ್ದಾರೆ. ಇವರ ಮಾನವ ಕಳ್ಳಸಾಗಣೆಯೂ ಹೆಚ್ಚುತ್ತಿದೆ' ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಮಾಹಿತಿ ನೀಡಿದೆ
ಟ ವಿಶ್ವಸಂಸ್ಥೆ ಆಹಾರ ಯೋಜನೆ ಅಡಿ ರೋಹಿಂಗ್ಯಾ ನಿರಾಶ್ರಿತರಿಗೆ ನೀಡುವ ತಿಂಗಳ ಭತ್ಯೆಯನ್ನು ಏಪ್ರಿಲ್ 1ರಿಂದ ಕಡಿತ ಮಾಡಲಾಗಿದೆ. 'ಇವರ ಜೀವನಮಟ್ಟ ಸುಧಾರಿಸಲು ಅಂತರರಾಷ್ಟ್ರೀಯ ಸಮುದಾಯ ಆರ್ಥಿಕ ಸಹಕಾರ ನೀಡಬೇಕು' ಎಂದು ವಿಶ್ವಸಂಸ್ಥೆ ಕೋರಿದೆ.

