ಲಕ್ನೋ: ಪತ್ನಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಪತಿಯಾದವನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಚಾರಣೆಯ ವೇಳೆ ಅಲಹಾಬಾದ್ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ತಿಂಗಳಿಗೆ 4,000 ರೂ. ಜೀವನಾಂಶ ಪಾವತಿಸಲು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ವೇಳೆ, ನ್ಯಾಯಮೂರ್ತಿ ಅತುಲ್ ಶ್ರೀಧರನ್ ಹಾಗೂ ನ್ಯಾಯಮೂರ್ತಿ ವಿವೇಕ್ ಸರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿವಾಹ ಸಂಬಂಧ ಹದಗೆಟ್ಟರೆ ಹೆಂಡತಿ ಮತ್ತು ಮಕ್ಕಳನ್ನು ನಿರ್ವಹಿಸಲು ಸಾಧ್ಯವಿಲ್ಲವೆಂದು ಭಾವಿಸುವವರು ಮದುವೆಯಾಗಬಾರದು. ಆದರೆ ಮದುವೆಯಾದ ಬಳಿಕ ಪತ್ನಿಯನ್ನು ನಿರ್ವಹಿಸುವ ಜವಾಬ್ದಾರಿಯಿಂದ 'ಆರ್ಥಿಕ ಸ್ಥಿತಿ ಕಳಪೆ' ಎಂಬ ನೆಪ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇಂದಿನ ಜೀವನ ವೆಚ್ಚವನ್ನು ನೋಡಿದರೆ 4,000 ರೂ. ಜೀವನಾಂಶ ಹೆಚ್ಚು ಅಥವಾ ಕೊಡಲು ಆಗದಷ್ಟು ದೊಡ್ಡ ಮೊತ್ತವಲ್ಲ ಎಂದು ಹೈಕೋರ್ಟ್ ಹೇಳಿದೆ.
ಮದುವೆಯಾದ ಬಳಿಕ ಪತ್ನಿಯನ್ನು ನಿರ್ವಹಿಸುವುದು ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆದ್ದರಿಂದ ತಾನು ಕೇವಲ ಕಾರ್ಮಿಕನಾಗಿದ್ದೇನೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಜೀವನಾಂಶಕ್ಕಾಗಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಪ್ರಯಾಗ್ ರಾಜ್ ನ ಕುಟುಂಬ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿತ್ತು.

