ಕೋಲ್ಕತ್ತ: 'ನನ್ನ ಸಂಪೂರ್ಣ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಇಂತಹ ಚುನಾವಣಾ ಆಯೋಗವನ್ನು ನಾನೆಂದೂ ನೋಡಿರಲಿಲ್ಲ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಹಾಗೂ ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಿಗಳಿಗೆ ರಕ್ಷಣೆ ನೀಡಲಾಗದ ಆಯೋಗ
ಮಾಲ್ದಾದಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ತೊಡಗಿದ್ದ ಏಳು ಅಧಿಕಾರಿಗಳಿಗೆ, ಸ್ಥಳೀಯರು ಘೇರಾವ್ ಹಾಕಿದ್ದರು. ಮತದಾರರ ಪಟ್ಟಿಯಿಂದ ಹೆಸರು ಅಳಿಸಿದ್ದರಿಂದ ಕೋಪಗೊಂಡ ಗುಂಪು, ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿತ್ತು. ಕೂಡಲೇ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಅಧಿಕಾರಿಗಳಿಗೆ ರಕ್ಷಣೆ ಒದಗಿಸಿದ್ದರು.
ಇದರ ಬೆನ್ನಲ್ಲೇ, ಚುನಾವಣಾ ಆಯೋಗದ ವಿರುದ್ಧ ಮಮತಾ ಗುಡುಗಿದ್ದಾರೆ.
ಮುರ್ಷಿದಾಬಾದ್ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿರುವ ಮಮತಾ, 'ನ್ಯಾಯಾಂಗದ ಅಧಿಕಾರಿಗಳಿಗೆ ರಕ್ಷಣೆ ನೀಡಲು ಚುನಾವಣಾ ಆಯೋಗ ವಿಫಲವಾಗಿರುವುದನ್ನು ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ, ಚುನಾವಣಾ ಆಯೋಗವು ರಾಜ್ಯದ ನಾಗರಿಕ ಹಾಗೂ ಪೊಲೀಸ್ ಆಡಳಿತದಲ್ಲಿ ತನ್ನದೇ ಅಧಿಕಾರಿಗಳನ್ನು ನೇಮಿಸಿದೆ. ಮಾತ್ರವಲ್ಲದೆ, 'ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ' ಎಂಬುದಾಗಿ ವರದಿ ನೀಡಿತ್ತು ಎಂದಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ರಾಜ್ಯದ ಹಲವು ಉನ್ನತಾಧಿಕಾರಿಗಳು ಬದಲಾಗಿದ್ದಾರೆ.
ಹೀಗಾಗಿ ಅವರು, ತಮ್ಮ ಸಂಪೂರ್ಣ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿರುದ್ಧವೂ ದೂರಿರುವ ಮಮತಾ, ಕೇಸರಿ ಪಕ್ಷವು ರಾಜ್ಯದ ಚುನಾವಣಾ ವ್ಯವಸ್ಥೆಯನ್ನೂ ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

