ನವದೆಹಲಿ: ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಶೃಂಗಸಭೆಗೆ (ಸಿಒಪಿ33) ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂಪಡೆದುಕೊಂಡಿದೆ ಎಂದು ಬುಧವಾರ ವರದಿಯಾಗಿದೆ.
ಸಾಮಾನ್ಯವಾಗಿ, ಹವಾಮಾನ ಶೃಂಗಸಭೆಯ ಆತಿಥ್ಯವನ್ನು ಯಾವ ರಾಷ್ಟ್ರ ವಹಿಸಿಕೊಳ್ಳಲಿದೆ ಎಂಬುದು ಎರಡು ವರ್ಷ ಮೊದಲೇ ನಿರ್ಧಾರವಾಗುತ್ತದೆ.
2023ರಲ್ಲಿ ದುಬೈನಲ್ಲಿ ಆಯೋಜನೆಗೊಂಡಿದ್ದ ಸಿಒಪಿ28 ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸಿಒಪಿ33 ಆತಿಥ್ಯ ವಹಿಸುವ ಕುರಿತು ಪ್ರಸ್ತಾಪಿಸಿದ್ದರು.
ಸಿಒಪಿ33ಗೆ ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂತೆಗೆದುಕೊಳ್ಳುತ್ತಿದೆ ಎಂದು ಈ ವಾರದ ಆರಂಭದಲ್ಲಿ ಮೂಲಗಳು ಖಚಿತಪಡಿಸಿದ್ದವು. ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಈ ಬೆಳವಣಿಗೆ ಕುರಿತು ಕೇಂದ್ರ ಪರಿಸರ ಸಚಿವಾಲಯದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ಬಾನ್ನಲ್ಲಿರುವ ಸಿಒಪಿ ಪ್ರಧಾನ ಕಚೇರಿಯಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆದರೆ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು, ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿಒಪಿಗೆ ಆತಿಥ್ಯ ವಹಿಸುವ ಪ್ರಸ್ತಾವನೆಯನ್ನು ಹಿಂಪಡೆದಿರುವುದರ ಕುರಿತ ವರದಿಯೊಂದನ್ನು ಹಂಚಿಕೊಂಡು 'ಸಂವೇದನಾಶೀಲ ನಡೆ' ಎಂದು ಪ್ರತಿಪಾದಿಸಿದ್ದಾರೆ.
ಪ್ಯಾರಿಸ್ನಲ್ಲಿ ನಡೆದ ಸಿಒಪಿ21ರಲ್ಲಿ ಕೈಗೊಳ್ಳಲಾಗಿದ್ದ ತೀರ್ಮಾನಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಡೇರಿಸಿಲ್ಲ. ಪಳಯುಳಿಕೆ ಇಂಧನಕ್ಕಾಗಿ ಲಾಬಿ ನಡೆಸುವವರ ಪ್ರಭಾವ ಹವಾಮಾನ ಶೃಂಗಸಭೆಯ ಮೇಲಿದೆ ಎಂದೂ ಬರೆದುಕೊಂಡಿದ್ದಾರೆ.

