ಕಲಿಯಾಬೋರ್: ಬಿಜೆಪಿಯು ಅಸ್ಸಾಂನ ಸ್ಥಳೀಯ ಮುಸ್ಲಿಮರ ವಿರೋಧಿಯಲ್ಲ, ನಮ್ಮ ವಿರೋಧ ಒಳನುಸುಳುವವರ ವಿರುದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟಪಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಕ್ರಮ ವಲಸೆಗೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಎಜಿಪಿ ಅಭ್ಯರ್ಥಿ ಕೇಶಬ್ ಮಹಾಂತ ಅವರ ಪರವಾಗಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಎಜಿಪಿ ನಡುವಿನ ಮೈತ್ರಿ ಸೂರ್ಯ ಮತ್ತು ಚಂದ್ರನಂತೆ ಎಂದು ಪ್ರತಿಪಾದಿಸಿದರು. ಮೈತ್ರಿ ಮುರಿದು ಬೀಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕು ಎಂದಿದ್ಧಾರೆ.
ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಘೇಂಡಾಮೃಗವನ್ನು ಅಪಾಯಕ್ಕೆ ಸಿಲುಕಿಸಿದ ಒಳನುಸುಳುಕೋರರಿಗೆ ಕಾಂಗ್ರೆಸ್ ಪಕ್ಷವು ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಹಸ್ತಾಂತರಿಸಿತ್ತು ಎಂದು ಶಾ ಆರೋಪಿಸಿದ್ದಾರೆ.
ಅತಿಕ್ರಮಣಕಾರರನ್ನು ಹೊರಹಾಕಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಮತ್ತೊಮ್ಮೆ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಸೇರಿಸಿದ್ದು ಎನ್ಡಿಎ ಸರ್ಕಾರ ಎಂದರು.
ಅತಿಕ್ರಮ ಪ್ರದೇಶದಿಂದ ನುಸುಳುಕೋರರನ್ನು ಹೊರಹಾಕಿದಾಗ, ಅದನ್ನು ಧರ್ಮಾಧಾರಿತ ರಾಜಕೀಯ ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸಿತು ಎಂದಿದ್ದಾರೆ.

