ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಭರ್ಜರಿ ತಯಾರಿ ನಡೆದಿದ್ದು, ಇದೇ ಏಪ್ರಿಲ್ 9 ರಂದು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇದೀಗ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಕೇರಳ ಚುನಾವಣಾ ಆಯೋಗ ಹೊಸ ಮತದಾರರನ್ನು ಸೆಳೆಯಲು 'ಜೆನ್ಝೀ' (ಜನರೇಷನ್ ಝೆಡ್) ನೃತ್ಯ ಮಾಡಿದ್ದು, ಆ ನೃತ್ಯ ಭಾರಿ ಗಮನ ಸೆಳೆದಿದೆ.
ಈ ನೃತ್ಯದಲ್ಲಿ ಸ್ವತಃ ಕೇರಳ ಚುನಾವಣಾ ಆಯೋಗದ ಸಿಇಒ (ಮುಖ್ಯ ಚುನಾವಣಾ ಅಧಿಕಾರಿ) ರತನ್ ಕೇಳ್ಕರ್ ಅವರು ತಮ್ಮ ತಂಡದೊಂದಿಗೆ ಜೆನ್ಜಿ ನೃತ್ಯ ಮಾಡಿದ್ದಾರೆ.
ಬೀಚ್ ಒಂದರಲ್ಲಿ ಮತದಾನಕ್ಕೆ ಪ್ರೇರೆಪಿಸುವ ನೃತ್ಯವನ್ನು ರತನ್ ಮಾಡಿದ್ದಾರೆ. ಅವರ ಜೊತೆಗೆ ತಿರುವನಂತಪುರ ಡಿಸಿ ಅನು ಕುಮಾರಿ, ಸಹಾಯಕ ಜಿಲ್ಲಾಧಿಕಾರಿ ಶಿವಶಕ್ತಿವೇಲ್ ಅವರು ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಅಷ್ಟೇ ಅಲ್ಲದೇ ಈ ನೃತ್ಯದಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಜೆನ್ಝೀ ತಲೆಮಾರಿನ ಯುವಕ-ಯುವತಿಯರೂ ಹೆಜ್ಜೆ ಹಾಕಿದ್ದಾರೆ.
'ಇದು ನಿಮ್ಮ ಮತ, ನಿಮ್ಮ ಮತ ನಮ್ಮ ರಾಜ್ಯಕ್ಕೆ ಬೇಕು, ಒಂದು ದೃಢ ನಿರ್ಧಾರ ಪಂದ್ಯದ ದಿಕ್ಕಿನ ಬದಲಾವಣೆಗೆ ಆಧಾರ, ಹಾಗೇ ನಿಮ್ಮ ಒಂದು ಮತ ರಾಜ್ಯದ ಭವಿಷ್ಯದ ನಿರ್ಧಾರ' ಎಂದು ಹಾಡಿನಲ್ಲಿ ಪ್ರಚಾರ ಮಾಡಲಾಗಿದೆ.
ಚುನಾವಣಾ ಆಯೋಗದ ಜೊತೆ ಅನೇಕ ಸಂಘ-ಸಂಸ್ಥೆಗಳು ಮತದಾನ ಹೆಚ್ಚಿಸಲು ಹಲವು ಆಕರ್ಷಣೆಯ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿವೆ.
ಇದೇ ಏಪ್ರಿಲ್ 9 ರಂದು ಕೇರಳ ವಿಧಾನಸಭೆಯ 146 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

